ಮೈಸೂರು, ಫೆ 11 (DaijiworldNews/KP): ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ಟಿಪ್ಪು ಎಕ್ಸ್ಪ್ರೆಸ್ ರೈಲಿಗೆ ಒಡೆಯರ್ ಎಕ್ಸ್ಪ್ರೆಸ್ ಎಂದು ಹೆಸರಿಡುವಂತೆ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಲಿಖಿತ ಮನವಿ ಮೂಲಕ ಒತ್ತಾಯಿಸಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿಗೆ ರೈಲು ಸೇವೆ ಕಲ್ಪಿಸಲು ಮಹಾರಾಜ ಚಾಮರಾಜ ಒಡೆಯರ್ರವರ ಕೊಡುಗೆ ಬಹಳಷ್ಟು ಇದೆ, ಹೀಗಾಗಿ ಒಡೆಯರ್ ಎಕ್ಸ್ಪ್ರೆಸ್ ಎಂದು ಹೆಸರಿಡಲು ಒತ್ತಾಯ ಮಾಡಲಾಗಿದೆ ಎಂದರು.
ಈ ಹಿಂದೆ 2018 ಟಿಪ್ಪು ಎಕ್ಸ್ಪ್ರೆಸ್ ರೈಲಿನ ಹೆಸರು ಬದಲಿಸಿ ‘ಚಾಮರಾಜ ಒಡೆಯರ್’ ಹೆಸರಿಡುವ ಬಗ್ಗೆ ರೈಲ್ವೆ ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಆಶ್ವಾಸನೆ ನೀಡಿದರು.
ಆದರೆ ಈವರೆಗೂ ಆಶ್ವಾಸನೆ ಈಡೇರಿರಲಿಲ್ಲ ಈ ನಿಟ್ಟಿನಲ್ಲಿ ದೆಹಲಿಗೆ ಹೋಗಿದ್ದಾಗ ಲಿಖಿತ ಮನವಿ ಸಲ್ಲಿಸಿ, ಒಡೆಯರ್ ಎಕ್ಸ್ಪ್ರೆಸ್ ಎಂದು ಹೆಸರಿಡಲು ಒತ್ತಾಯ ಮಾಡಲಾಗಿದೆ ಎಂದರು.