ಬೆಂಗಳೂರು, ಜ 25 (DaijiworldNews/KP): ಹೈಕಮಾಂಡ್ ಮತ್ತು ಎಲ್ಲರ ಜೊತೆ ಚರ್ಚಿಸಿ ಜಿಲ್ಲೆಗಳ ಉಸ್ತುವಾರಿ ಹೊಣೆಯನ್ನು ಸಚಿವರುಗಳಿಗೆ ವಹಿಸಲಾಗಿದ್ದು, ಇದರ ಬಗ್ಗೆ ಯಾವ ಸಚಿವರಿಗೂ ಅಸಮಾಧಾನವಿಲ್ಲ, ಯಾರು ಕೂಡ ಅಸಮಾಧಾನ ವ್ಯಕ್ತಪಡಿಸಿಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಇದು ತನ್ನ ನಿರ್ಧಾರವಲ್ಲ, ನಮ್ಮದು ರಾಷ್ಟ್ರೀಯ ಪಕ್ಷ, ರಾಷ್ಟ್ರೀಯ ಮಟ್ಟದ ನೀತಿಯಡಿಯಲ್ಲಿ ಹೈಕಮಾಂಡ್ ಮತ್ತು ಎಲ್ಲರ ಜೊತೆ ಚರ್ಚಿಸಿ ಜಿಲ್ಲೆಗಳ ಉಸ್ತುವಾರಿ ಹೊಣೆಯನ್ನು ಸಚಿವರುಗಳಿಗೆ ವಹಿಸಲಾಗಿದ್ದು. ಈ ವಿಚಾರದಲ್ಲಿ ಯಾರಿಗೂ ಅಸಮಾಧಾವಿಲ್ಲ ಯಾವ ಸಚಿವರು ಕೂಡ ಬಿಜೆಪಿಯಿಂದ ಕಾಂಗ್ರೆಸ್ ಗೆ ವಲಸೆ ಹೋಗುವುದಿಲ್ಲ" ಎಂದರು.
ಇನ್ನು ಈ ವಿಚಾರಕ್ಕೆ ಸಂಬಂದಿಸಿದಂತೆ ಈಗಾಗಲೇ ಹಲವು ನಾಯಕರು ಅಸಮಾಧಾನ ಹೊರಹಾಕಿದ್ದಾರೆ. ತುಮಕೂರು ಜಿಲ್ಲೆ ಕೈತಪ್ಪಿ ಹೋಗಿರುವುದಕ್ಕೆ ನನಗೆ ಬೇಸರವಿದೆ, ತುಮಕೂರು ನನ್ನ ತವರು ಜಿಲ್ಲೆ, ಅಲ್ಲಿಯ ಬಗ್ಗೆ ನನಗೆ ತಿಳಿದಿದೆ, ಕೆಲಸ ಮಾಡಲು ಅನುಕೂಲವಾಗುತ್ತದೆ. ಕೆಲಸದ ವಿಷಯದಲ್ಲಿ ರಾಜಿಯಿಲ್ಲ, ಆದರೆ ಬೇರೆ ಕಡೆ ಹೋಗಿ ಯಜಮಾನಿಕೆ ಮಾಡಲು ನನಗೆ ಇಚ್ಛೆಯಿಲ್ಲ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ಸಚಿವ ಎಂಟಿಬಿ ನಾಗರಾಜ್ ಬಹಿರಂಗವಾಗಿಯೇ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು. ನಾನು ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದೆ, ಆದರೆ ನನಗೆ ಚಿಕ್ಕಬಳ್ಳಾಪುರ ಜಿಲ್ಲೆ ಕೊಟ್ಟುಬಿಟ್ಟಿದ್ದಾರೆ. ಎಲ್ಲಿಯಾದರು ಕೆಲಸ ಮಾಡಬೇಕು, ನನ್ನ ಮನಸ್ಸಿನಲ್ಲಿದ್ದದ್ದನ್ನು ಸಿಎಂಗೆ ಹೇಳಿದ್ದೇನೆ, ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ತೆಗೆದುಕೊಳ್ಳಲಿ, ಸಚಿವ ಸ್ಥಾನದಿಂದ ತೆಗೆದು ಬೇರೆ ಹುದ್ದೆ ಕೊಟ್ಟರೂ ನಾನು ಕೆಲಸ ಮಾಡಲು ಸಿದ್ಧನಿದ್ದೇನೆ, ರಾಜಕೀಯ ಜೀವನಕ್ಕೆ ನಿವೃತ್ತಿ ಪಡೆಯುತ್ತೇನೆ ಹೊರತು ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಎಂಟಿಬಿ ನಾಗರಾಜ್ ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಸ್ತುವಾರಿ ಸಿಗದಿರುವುದಕ್ಕೆ, ಸಚಿವ ಮಾಧುಸ್ವಾಮಿ ತುಮಕೂರು ಜಿಲ್ಲೆ ಉಸ್ತುವಾರಿ ಸಿಗದಿದ್ದಕ್ಕೆ, ಡಾ ಕೆ ಸುಧಾಕರ್ ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಸಿಗದಿರುವುದಕ್ಕೆ ಈಗಾಗಲೇ ಅಸಮಾಧಾನ ಹೊರಹಾಕಿದ್ದಾರೆ.