ತಿರುವನಂತಪುರ, ಜ 20 (DaijiworldNews/MS): ದೆಹಲಿ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಲು ಕೇರಳ ಸ್ತಬ್ಧಚಿತ್ರವನ್ನು ಸೇರ್ಪಡೆ ಮಾಡಲು ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಒತ್ತಾಯಿಸಿದ್ದಾರೆ.
ಟ್ಯಾಬ್ಲೋವನ್ನು ಸೇರಿಸಲು ತುರ್ತು ಹಸ್ತಕ್ಷೇಪವನ್ನು ಕೋರಿ ಪ್ರಧಾನಿಗೆ ಸಿಎಂ ಪಿಣರಾಯಿ ಪತ್ರ ಬರೆದು ಒತ್ತಾಯಿಸಿದ್ದಾರೆ.
‘ಒಂದೇ ಜಾತಿ, ಒಂದೇ ಮತ, ಒಂದೇ ದೇವರು' ಘೋಷಣೆಯ ಮೂಲಕ ಸಾಮಾಜದಲ್ಲಿ ಕ್ರಾಂತಿಗೆ ನಾಂದಿ ಹಾಡಿದ, ಸಮಾಜ ಸುಧಾರಕ, ಆಧ್ಯಾತ್ಮಿಕ ಪಥದರ್ಶಕ ನಾರಾಯಣ ಗುರು ಅವರ ಪ್ರತಿಮೆ ಒಳಗೊಂಡ ಸ್ತಬ್ಧಚಿತ್ರಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರದ ನಿರ್ಧಾರಕ್ಕೆ ಕೇರಳ ಮಾತ್ರವಲ್ಲದೆ ಕರ್ನಾಟಕದಿಂದಲೂ ಭಾರಿ ಪ್ರತಿಭಟನೆ ವ್ಯಕ್ತವಾಗಿದೆ.
'ಪ್ರಸ್ತಾವಿತ ಸ್ತಬ್ಧಚಿತ್ರವು ಪ್ರಬಲ ಸಾಮಾಜಿಕ ಸಂದೇಶವನ್ನು ಒಳಗೊಂಡಿದೆ. ಸಮಕಾಲೀನ ಸಾಮಾಜಿಕ ಸನ್ನಿವೇಶದಲ್ಲಿ ಹೆಚ್ಚು ಪ್ರಸ್ತುತವಾಗಿದೆ. ಕೇರಳದ ನವೋದಯ ಚಳುವಳಿಯನ್ನು ಮುನ್ನಡೆಸಿದ ಮಹಾನ್ ತತ್ವಜ್ಞಾನಿ ಮತ್ತು ಸಮಾಜ ಸುಧಾರಕ ಶ್ರೀ ನಾರಾಯಣ ಗುರುಗಳ ಚಿಂತನೆಗಳು ವಿಶ್ವದಾದ್ಯಂತ ಗಮನ ಸೆಳೆದಿದ್ದವು. ಇದರ ಚಿತ್ರಣ ಸ್ತಬ್ಧಚಿತ್ರದಲ್ಲಿ ಅಡಕಗೊಂಡಿದೆ. ಹೀಗಾಗಿ ಸ್ತಬ್ಧಚಿತ್ರವು ಯುವ ಪೀಳಿಗೆಗೆ ಅಮೂಲ್ಯ ಸಂದೇಶವನ್ನು ಸಾರಲಿದೆ' ಎಂದು ಮೋದಿಗೆ ಬರೆದ ಪತ್ರದಲ್ಲಿ ಪಿಣರಾಯಿ ಉಲ್ಲೇಖಿಸಿದ್ದಾರೆ.