ಬೆಂಗಳೂರು, ಜ 20 (DaijiworldNews/MS): ರಾಜ್ಯದಲ್ಲಿ ಹೇರಲಾಗಿರುವ ವಾರಾಂತ್ಯ ಕರ್ಪ್ಯೂ ತೆರವುಗೊಳಿಸಬೇಕು ಎಂಬ ಒತ್ತಡ ಹೆಚ್ಚಾಗಿರುವ ನಡುವೆಯೇ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ತಜ್ಞರು, ಸಚಿವರ ಸಭೆ ಮಹತ್ವವನ್ನು ಪಡೆದುಕೊಂಡಿದೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಮಧ್ಯಾಹ್ನ 1 ಗಂಟೆಗೆ ನಡೆಯುವ ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಕಂದಾಯ ಸಚಿವ ಆರ್. ಅಶೋಕ್, ಉನ್ನತ ಶಿಕ್ಷಣ ಸಚಿವ ಡಾ.ಸಿ. ಎನ್ .ಅಶ್ವತ್ಥ್ ನಾರಾಯಣ ಸೇರಿದಂತೆ ತಜ್ಞರು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಸಭೆಯಲ್ಲಿ ವೀಕೆಂಡ್ ಕರ್ಪ್ಯೂ, ನೈಟ್ ಕರ್ಪ್ಯೂ ಕುರಿತಂತೆ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದ್ದು, ಸಭೆಯ ಮುಕ್ತಾಯದ ನಂತರ ಹೊಸ ಮಾರ್ಗಸೂಚಿ ಹೊರಡಿಸುವ ಸಾಧ್ಯತೆ ಇದ್ದು ವಾರಾಂತ್ಯ ಕರ್ಪ್ಯೂ ಅಂತ್ಯವಾಗುತ್ತದೋ ಅಥವಾ ಕೋವಿಡ್ ಹೆಚ್ಚಿರುವ ಪ್ರದೇಶದಲ್ಲಿ ಮಾತ್ರ ವಿಧಿಸಲಾಗುತ್ತದೋ ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ.
ವೀಕೆಂಡ್ ಕರ್ಪ್ಯೂ ತೆರವುಗೊಳಿಸುವ ಬಗ್ಗೆ ವಿವಿಧ ಸಂಘ ಸಂಸ್ಥೆಗಳಲ್ಲದೆ ಬಿಜೆಪಿಯ ಹಿರಿಯ ನಾಯಕರಿಂದಲೂ ಒತ್ತಡ ಬಂದಿರುವ ಹಿನ್ನೆಲೆಯಲ್ಲಿ ಕೆಲವು ಬಿಗಿ ಕ್ರಮಗಳೊಂದಿಗೆ ವೀಕೆಂಡ್ ಕರ್ಪ್ಯೂ ರದ್ದುಪಡಿಸುವ ಅಥವಾ ಸಡಿಲಗೊಳಿಸುವ ಸಾಧ್ಯತೆ ಇದೆ. ಇದರೊಂದಿಗೆ ರಾತ್ರಿ ಕರ್ಪ್ಯೂ 11 ರಿಂದ ಬೆಳಗ್ಗೆ 5 ಗಂಟೆಯವರೆಗೆ ಕರ್ಪ್ಯೂ ನಿಗದಿ ಮಾಡುವುದು ಸೂಕ್ತ ಎಂಬ ವಾದವೂ ಇದೆ.