ಲಖನೌ, ಜ 20 (DaijiworldNews/KP): ಉತ್ತರ ಪ್ರದೇಶದ ಗೋರಖ್ಪುರ ಚುನಾವಣೆಗೆ ಪಕ್ಷಗಳ ಘಟಾನುಘಟಿ ನಾಯಕರ ರಣಾಂಗಣಕ್ಕೆ ಸಿದ್ದವಾಗುತ್ತಿದೆ. ಹಾಲಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ದ ದಲಿತ ನಾಯಕ, ಆಜಾದ್ ಸಮಾಜ ಪಾರ್ಟಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಕಣಕಿಳಿಯಲು ಸಜ್ಜಾಗಿದ್ದಾರೆ.
ಆಜಾದ್ ಸಮಾಜ ಪಕ್ಷವೂ ಸಮಾಜವಾದಿ ಪಾರ್ಟಿಯೊಂದಿಗೆ ಮೈತ್ರಿ ಮಾಡಿಕೊಳ್ಳಬಹುದು ಎಂಬ ವದಂತಿ ಈ ಹಿಂದೆ ಹರಡಿದ್ದರೂ, ಆ ಬಳಿಕ ಚಂದ್ರಶೇಖರ್ ಆಜಾದ್ " ನಾವು ಉತ್ತರ ಪ್ರದೇಶದಲ್ಲಿ ಪರ್ಯಾಯವಾಗಿ ನಿಲ್ಲುತ್ತೇವೆ (ಇತರೆ ರಾಜಕೀಯ ಪಕ್ಷಗಳಿಗೆ). ಶಾಸಕ ಮತ್ತು ಸಚಿವ ಸ್ಥಾನದ ಆಫರ್ಗಳನ್ನು ನಾನು ತಿರಸ್ಕರಿಸಿದ್ದೇನೆ" ಎಂದು ಹೇಳಿದ್ದರು.
ಚಂದ್ರಶೇಖರ್ ಆಜಾದ್ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. 2019 ರಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸುವುದಾಗಿ ಘೋಷಿಸಿದ ನಂತರ ಹಿಂದೆ ಸರಿದಿದ್ದರು. ಈ ಬಾರಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಕಣಕಿಳಿದ್ದೇನೆ ಎಂದು ಘೋಷಿಸಿಕೊಂಡಿದ್ದಾರೆ.
ಸಮಾಜವಾದಿ ಪಕ್ಷದೊಂದಿಗಿನ ಮೈತ್ರಿ ಬಗ್ಗೆ ಮಾತನಾಡಿದ್ದ ಚಂದ್ರಶೇಖರ್ ಆಜಾದ್ "ಅಖಿಲೇಶ್ ಯಾದವ್ ದಲಿತರ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ ವಿನಃ, ದಲಿತರು ಬೇಕಾಗಿಲ್ಲ" ಎಂದು ಆರೋಪಿಸಿದ್ದರು.
ಉತ್ತರ ಪ್ರದೇಶದಲ್ಲಿ ಆಜಾದ್ ಸಮಾಜ್ ಪಾರ್ಟಿ 33 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ನಿರ್ಧಾರಕ್ಕೆ ಬಂದಿದೆ.
ಫೆಬ್ರುವರಿ 10ರಿಂದ 7 ಹಂತಗಳಲ್ಲಿ ಉತ್ತರಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿದೆ. ಮಾರ್ಚ್ 7ರಂದು ಏಳನೇ ಹಂತದ ಚುನಾವಣೆ ನಡೆಯಲಿದ್ದು, ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಮಾರ್ಚ್ 10ರಂದು ಹೊರಬೀಳಲಿದೆ.