ಲಕ್ನೋ, ಜ 20 (DaijiworldNews/MS): ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ ಇನ್ನೇನು ಸಮೀಪಿಸುತ್ತಿದೆ. ಚುನಾವಣೆಗೆ ಕೆಲ ದಿನಗಳೇ ಬಾಕಿ ಉಳಿದಿರುವಾಗ ಪಕ್ಷಾಂತರ ಪರ್ವವೂ ಅಲ್ಲಿ ಜೋರಾಗಿದೆ. ಈ ನಡುವೆ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಸೋದರ ಸಂಬಂಧಿ ಮತ್ತು ಸಮಾಜವಾದಿ ಪಕ್ಷದ ಮಾಜಿ ಶಾಸಕ ಪ್ರಮೋದ್ ಗುಪ್ತಾ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಮೌರ್ಯ ಇಂದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.
ಪ್ರಿಯಾಂಕಾ ಗಾಂಧಿ ಅವರು ಉತ್ತರ ಪ್ರದೇಶದಲ್ಲಿ ಆರಂಭಿಸಿದ್ದ 'ಲಡ್ಕಿ ಹೂಂ, ಲಡ್ ಸಕ್ತಿ ಹೂಂ' ಅಭಿಯಾನದ ರೂವಾರಿ ಪ್ರಿಯಾಂಕಾ ಮೌರ್ಯ ಅಗಿದ್ದಾರೆ. ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಮಾತನಾಡಿದ ಪ್ರಿಯಾಂಕಾ ಮೌರ್ಯ ಕಾಂಗ್ರೆಸ್ನ 'ಲಡ್ಕಿ ಹೂಂ, ಲಡ್ ಸಕ್ತಿ ಹೂಂ' ಎಂಬುದು ಕೇವಲ ಘೋಷಣೆಯಾಗಿದೆ. ಏಕೆಂದರೆ ‘ಲಡ್ಕಿ’ ಆಗಿರುವ ನನಗೆ ಲಂಚ ನೀಡಲು ಸಾಧ್ಯವಾಗದ ಕಾರಣ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿದ್ದಾರೆ.
ಕ್ಷೇತ್ರದಲ್ಲಿ ನಾನು ಕಷ್ಟಪಟ್ಟು ಕೆಲಸ ಮಾಡಿದರೂ ನನಗೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಟಿಕೆಟ್ ಸಿಗಲಿಲ್ಲ ಎಂದು ನನಗೆ ಬೇಸರವಾಗಿದೆ. `ಲಡ್ಕಿ ಹೂಂ ಲಾಡ್ ಸಕ್ತಿ ಹೂಂ’ ಪ್ರಚಾರದಲ್ಲಿ ನನ್ನ ಮುಖವನ್ನು ಬಳಸಲಾಯಿತು. ಪ್ರಿಯಾಂಕಾ ಗಾಂಧಿಯ ಕಾರ್ಯದರ್ಶಿ ಸಂದೀಪ್ ಸಿಂಗ್ ಅವರಿಗೆ ಲಂಚ ನೀಡಲು ಸಾಧ್ಯವಾಗದ ಒಬಿಸಿ ಮಹಿಳೆಯಾದ ನನಗೆ ಟಿಕೆಟ್ ನಿರಾಕರಿಸಲಾಗಿದೆ ಎಂದು ಪ್ರಿಯಾಂಕಾ ಮೌರ್ಯ ಇದಕ್ಕೂ ಹಿಂದೆ ಹೇಳಿಕೊಂಡಿದ್ದರು.
ನಾನು ಟಿಕೆಟ್ ಪಡೆಯಲು ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿದ್ದೆ. ಆದರೆ, ಟಿಕೆಟ್ ಅನ್ನು ಯಾರಿಗೆ ಕೊಡಬೇಕೆಂಬುದು ಮೊದಲೇ ನಿರ್ಧಾರವಾಗಿತ್ತು. ಕೇವಲ ಒಂದು ತಿಂಗಳ ಹಿಂದೆ ಪಕ್ಷ ಸೇರಿದ ವ್ಯಕ್ತಿಗೆ ನೀಡಲಾಯಿತು ಎಂದು ಬೇಸರಿಸಿಕೊಂಡಿದ್ದರು.