ಬೆಂಗಳೂರು, ಜ 20 (DaijiworldNews/MS): "ಕಾಂಗ್ರೆಸ್ ಪಕ್ಷದ ನಾಯಕರ ಗೂಂಡಾಗಿರಿ ಮತ್ತೆ ಆರಂಭಗೊಂಡಿದೆ" ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಮಹಮ್ಮದ್ ನಲಪಾಡ್ ಬೆಂಬಲಿಗರು ಹಲ್ಲೆ ಆರೋಪ ಪ್ರಕರಣವನ್ನು ಉಲ್ಲೇಖಿಸಿ ಬಿಜೆಪಿ ಕಾಂಗ್ರೆಸ್ ಪಕ್ಷದ ವಿರುದ್ದ ಕಿಡಿಕಾರಿದೆ.
ಈ ಘಟನೆಯ ಕುರಿತಾಗಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, "ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಶಿಷ್ಯ ಮಹಮ್ಮದ್ ನಲಪಾಡ್ ಬೆಂಬಲಿಗರು ಕಾಂಗ್ರೆಸ್ ಕಾರ್ಯಕರ್ತರ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಇದನ್ನು ಗಮನಿಸಿದರೆ ಕಾಂಗ್ರೆಸ್ಸಿಗರು ಕರ್ನಾಟಕವನ್ನು ಗೂಂಡಾ ರಾಜ್ಯ ಮಾಡಲು ಹೊರಟಂತಿದೆ" ಎಂದು ಕಿಡಿಕಾರಿದೆ.
"ಯುವ ಕಾಂಗ್ರೆಸ್ಸಿನ ನಿಯೋಜಿತ ಅಧ್ಯಕ್ಷ ನಲಪಾಡ್ ರೌಡಿಸಂ ಪ್ರಕರಣಗಳು ಇದೇ ಮೊದಲೇನಲ್ಲ. ಅಮಾಯಕ ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ, ದಲಿತ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರಿಗೆ ಬೆದರಿಕೆ ಸೇರಿದಂತೆ ಅನೇಕ ಪ್ರಕರಣಗಳು ಈ ಪುಡಿ ರೌಡಿಯ ಮೇಲಿದೆ. ಆದರೂ, ಕೆಪಿಸಿಸಿ ಅಧ್ಯಕ್ಷ (ಡಿ.ಕೆ.ಶಿವಕುಮಾರ್) ಮೌನಕ್ಕೆ ಶರಣಾಗಿರುವುದೇಕೆ?" ಎಂದು ಬಿಜೆಪಿ ಪ್ರಶ್ನಿಸಿದೆ.
ಇತ್ತೀಚೆಗೆ ಎಂ.ಎಸ್. ರಕ್ಷಾ ರಾಮಯ್ಯ ಬೆಂಬಲಿಗನ ಮೇಲೆ ಮಹಮ್ಮದ್ ನಲಪಾಡ್ ಸೇರಿದಂತೆ ಆತನ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿತ್ತು. ಈ ವರದಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದೆ.