ಬೆಂಗಳೂರು, ಜ 20 (DaijiworldNews/MS): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕು ಏರುಗತಿಯಲ್ಲಿ ಸಾಗುತ್ತಿದ್ದು , ದೈನಂದಿನ ಹೊಸ ಪ್ರಕರಣ ಸಂಖ್ಯೆಯಲ್ಲಿಯೂ ಉಲ್ಬಣ ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರ 15 ದಿನಗಳ ಕಾಲ ಶಾಲಾ-ಕಾಲೇಜುಗಳ ತರಗತಿಗಳನ್ನು ಸ್ಥಗಿತಗೊಳಿಸಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಶಾಲಾ-ಕಾಲೇಜು ಹಾಗೂ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಪ್ರಕರಣ ಹೆಚ್ಚಿದೆ. ಹೀಗಾಗಿ ತಾತ್ಕಲಿಕವಾಗಿ ತರಗತಿಗಳನ್ನು , ವಸತಿ ಶಾಲೆಗಳನ್ನು ಸ್ಥಗಿತಗೊಳಿಸಬೇಕು. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮತ್ತು ಸೋಂಕು ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ನೀವು ನೀಡಿದ ವರದಿಯಲ್ಲಿಯೇ ವಾಸ್ತವಾಂಶದ ಇದೆ. ಆ ಮಾಹಿತಿಗಳ ಆಧಾರದ ಮೇಲೆ ನೀವು ನಿರ್ಣಯ ತೆಗೆದುಕೊಳ್ಳಬೇಕು. ಈಗಾಗಲೇ ಅನೇಕ ಶಾಲಾ-ಕಾಲೇಜುಗಳಲ್ಲಿ ಪಾಸಿಟಿವ್ ರೇಟ್ ಜಾಸ್ತಿಯಾಗಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ವಾರಾಂತ್ಯ ಕರ್ಪ್ಯೂ ಬಗ್ಗೆ ಬಿಜೆಪಿ ನಾಯಕರಲ್ಲೇ ಸಮನ್ವಯತೆ ಇಲ್ಲ. ಸಾರ್ವಜನಿಕರ ಒಂದು ವರ್ಗ ಪ್ರತಿನಿತ್ಯ ವ್ಯಾಪಾರ, ಕೂಲಿ ಮಾಡಿ ಜೀವನ ನಡೆಸುತ್ತಾರೆ. ಅವರ ಕುಟುಂಬದ ನಿರ್ವಹಣೆ ಅವರ ಒಂದು ದಿನದ ಆದಾಯದ ಮೇಲೆ ಅವಲಂಭಿಸಿದೆ. ಇವರ ಬದುಕು ಕಟ್ಟುವುದು ಜವಬ್ದಾರಿ ಸರ್ಕಾರಕ್ಕಿದೆ. ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಬೇಕೆಂಬುದು ನಮ್ಮ ಉದ್ದೇಶ ಅಲ್ಲ. ನಾವು ಕೂಡ ಸರ್ಕಾರ ನಡೆಸಿದವರೇ ಹೀಗಾಗಿ ಸಲಹೆ ನೀಡುತ್ತಿದ್ದೇವೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.