ನವದೆಹಲಿ, ಜ 20 (DaijiworldNews/MS): ಚೀನಾದ ಡ್ರ್ಯಾಗನ್ ಸೇನೆ ಅರುಣಾಚಲ ಪ್ರದೇಶದ ಯುವಕನನ್ನು ಅಪಹರಣ ಮಾಡಿದೆ ಎಂಬ ಆರೋಪ ಕೇಳಿಬಂದಿದ್ದು, ಈ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ , "ಪ್ರಧಾನಮಂತ್ರಿ ಮೋದಿಯವರು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ, ಕಾಳಜಿ ಇಲ್ಲದ ಅವರ ನಡವಳಿಕೆಗೆ ಹೇಡಿತನದ ಅವರ ಮೌನವೇ ಸಾಕ್ಷಿಯಾಗಿದೆ" ಎಂದು ಟೀಕಿಸಿದ್ದಾರೆ.
ಮಂಗಳವಾರ ಅರುಣಾಚಲ ಪ್ರದೇಶದ ಮಿರಾಮ್ ಟ್ಯಾರೋನ್ ಎಂಬ 17 ವರ್ಷದ ಯುವಕ ನನ್ನು ಚೀನಾ ಸೇನೆ ಅಪಹರಿಸಿದೆ ಎಂಬ ಆರೋಪ ಕೇಳಿಬಂದಿದೆ.
ಚೀನಾ ಭಾರತದ ಗಡಿಪ್ರದೇಶದಲ್ಲಿ ದುಸ್ಸಾಹಸಕ್ಕೆ ಕೈಹಾಕಿದೆ. ಆದರೆ ಬಿಜೆಪಿ ಸರ್ಕಾರ ಮೌನಕ್ಕೆ ಶರಣಾಗಿದೆ. ಪ್ರಧಾನಿಯವರೇ, ನಮ್ಮ ಪ್ರದೇಶದೊಳಕ್ಕೆ ನುಗ್ಗಲು ಚೀನಾ ಸೇನೆಗೆ ಅದೆಷ್ಟು ಧೈರ್ಯವಿದೆ? ನಮ್ಮ ಪ್ರಜೆಗಳನ್ನೇ ಅಪಹರಿಸಲು ಅವರಿಗೆ ಹೇಗೆ ಸಾಧ್ಯವಾಯಿತು? ನಿಮ್ಮದೇ ಪಕ್ಷದ ಸಂಸದರ ಮನವಿಯನ್ನೂ ಕೇಂದ್ರ ಸರ್ಕಾರ ಕೇಳಿಸಿಕೊಳ್ಳುತ್ತಿಲ್ಲ ಯಾಕೆ? ನಾವು ಮಿರಾಮ್ ಟ್ಯಾರೋನ್ ಅವರ ಕುಟುಂಬದೊಂದಿಗೆ ಇದ್ದೇವೆ ಮತ್ತು ಭರವಸೆಯನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ.
ಅರುಣಾಚಲ ಪ್ರದೇಶ ಸಂಸದ ತಪಿರ್ ಗೌ ಈ ಬಗ್ಗೆ ಮಾತನಾಡಿದ್ದು, ಪಿಎಲ್ಎ ಮಂಗಳವಾರ 17 ವರ್ಷದ ಬಾಲಕನನ್ನು ಭಾರತೀಯ ಪ್ರದೇಶದಿಂದ ಅಪಹರಿಸಿದೆ ಎಂದು ಆರೋಪ ಮಾಡಿದ್ದಾರೆ.
ಇನ್ನೊಂದೆಡೆ ರಕ್ಷಣಾ ಇಲಾಖೆಯ ಪಿಎಲ್ಎಯನ್ನು ಸಂಪರ್ಕಿಸಿ, ಗಿಡಮೂಲಿಕೆಗಳು ಹಾಗೂ ಇನ್ನಿತರ ವಸ್ತುಗಳನ್ನು ಹುಡುಕುತ್ತಾ ಯುವಕನೋರ್ವ ದಾರಿ ತಪ್ಪಿ ಚೀನಾಪ್ರದೇಶದಿಂದ ಕಣ್ಮರೆಯಾಗಿದ್ದು ಶಿಷ್ಟಾಚಾರದ ಪ್ರಕಾರ ಚೀನಾ ಸೇನೆ ಆತನನ್ನು ಪತ್ತೆ ಮಾಡಿ ಮರಳಿ ಭಾರತದ ವಶಕ್ಕೆ ಒಪ್ಪಿಸಬೇಕಿದೆ ಎಂದು ಹೇಳಿದೆ.