ಲಕ್ನೋ, ಜ 20 (DaijiworldNews/MS): ಉತ್ತರ ಪ್ರದೇಶದ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಬಿಜೆಪಿ ಶಾಸಕರನ್ನು ಅವರ ಸ್ವಂತ ಕ್ಷೇತ್ರವಾದ ಮುಜಾಫರ್ನಗರದ ಗ್ರಾಮಸ್ಥರು ಓಡಿಸಿರುವ ಘಟನೆ ನಡೆದಿದ್ದು ಇದರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಖತೌಲಿ ಮೂಲದ ಬಿಜೆಪಿ ಶಾಸಕ ವಿಕ್ರಮ್ ಸಿಂಗ್ ಸೈನಿ ಅವರು ಬುಧವಾರ ಗ್ರಾಮವೊಂದರ ಸಭೆಗೆ ಆಗಮಿಸಿದ್ದರು. ಈ ವೇಳೆ ಗ್ರಾಮಸ್ಥರು ಶಾಸಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈರಲ್ ಆದ ವೀಡಿಯೊದಲ್ಲಿ, ಗ್ರಾಮಸ್ಥರ ಗುಂಪು ಸೈನಿಕಾರನ್ನು ಹಿಂಬಾಲಿಸಿ, ಕಾರಿನಿಂದ ಕೆಳಗೆ ಇಳಿಯುವಂತೆ ಕೂಗಾಡಿದ್ದಾರೆ. ಮಾತ್ರವಲ್ಲ ಗ್ರಾಮಸ್ಥರು ಶಾಸಕರ ವಿರುದ್ಧ ಘೋಷಣೆ ಕೂಗುತ್ತಿರುವುದು ಕೇಳಿಬರುತ್ತಿದೆ. ಕಳೆದ ವರ್ಷ ಒಂದು ವರ್ಷದ ಪ್ರತಿಭಟನೆಯ ನಂತರ ಸರ್ಕಾರವು ರದ್ದುಗೊಳಿಸಿದ ವಿವಾದಾತ್ಮಕ ಕೃಷಿ ಕಾನೂನುಗಳಿಗೆ ಅನೇಕರು ಅಸಮಾಧಾನವನ್ನು ಹೊಂದಿದ್ದಾರೆ.
ಶಾಸಕ ವಿಕ್ರಮ್ ಸೈನಿ ವಿವಾದಾತ್ಮಕ ಹೇಳಿಕೆಯಿಂದ ಹಿಂದೊಮ್ಮೆ ಕುಖ್ಯಾತಿ ಪಡೆದಿದ್ದರು. 2019 ರಲ್ಲಿ, ಅವರು ಭಾರತದಲ್ಲಿ ಅಸುರಕ್ಷಿತ ಎಂದು ಭಾವಿಸುವವರಿಗೆ "ಬಾಂಬ್" ಹಾಕುವುದಾಗಿ ಬೆದರಿಕೆ ಹಾಕಿದರು. ಅದಕ್ಕೂ ಒಂದು ವರ್ಷದ ಹಿಂದೆ, "ನಮ್ಮ ದೇಶವನ್ನು ಹಿಂದೂಸ್ತಾನ್ ಎಂದು ಕರೆಯಲಾಗುತ್ತದೆ, ಅಂದರೆ ಇದು ಹಿಂದೂಗಳ ರಾಷ್ಟ್ರ" ಎಂದು ಹೇಳಿದ್ದರು. ಗೋಹತ್ಯೆ ಮಾಡುವವರ ಕೈಕಾಲು ಮುರಿಯುವುದಾಗಿಯೂ ಬೆದರಿಕೆ ಹಾಕಿದ್ದರು.
ಉತ್ತರ ಪ್ರದೇಶದ ವಿಧಾನಸಭಾ ಚನಾವಣೆಯು ಫೆ. 10ರಂದು ಆರಂಭವಾಗಲಿದ್ದು, ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10ಕ್ಕೆ ಫಲಿತಾಂಶ ಪ್ರಕಟವಾಗಲಿದೆ.