ಬೆಂಗಳೂರು,ಜ 19 (DaijiworldNews/HR): ಕೊರೊನಾದ 3ನೇ ಅಲೆಯಲ್ಲಿ ಪ್ರತಿ ದಿನ 1.2 ಲಕ್ಷ ಕೊರೊನಾ ಪ್ರಕರಣಗಳು ದಾಖಲಾಗಲಿವೆ ಎಂದು ತಜ್ಞರು ಮುನ್ನೆಚ್ಚರಿಕೆ ನೀಡಿರುವುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿಯ ಸಭೆಯಲ್ಲಿ ವರ್ಚ್ಯುವಲ್ ಮೂಲಕ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬೊಮ್ಮಾಯಿಯವರು ರಾಜ್ಯದ 18 ಜಿಲ್ಲಾಧಿಕಾರಿಗಳ ಜೊತೆಗೆ ಸಭೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. ಕೊರೊನಾ 3ನೇ ಅಲೆ ಎರಡು ಅಲೆಗಳಿಗಿಂತ ವೇಗವಾಗಿ ಹರಡುತ್ತಿದ್ದು, ಅಷ್ಟೇ ವೇಗವಾಗಿ ಕಡಿಮೆಯಾಗುತ್ತಿದೆ. ತಜ್ಞರ ಪ್ರಕಾರ ಪ್ರತಿ ದಿನ 1.20 ಲಕ್ಷ ಕೊವಿಡ್ ಪ್ರಕರಣಗಳು ದಾಖಲಾಗಲಿದ್ದು, ಫೆಬ್ರವರಿ 2 ಮತ್ತು 3 ನೇ ವಾರದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗಲಿದೆ ಎಂದರು.
ಇನ್ನು ಪ್ರತಿ ಜಿಲ್ಲೆಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಕೆಲವು ಸೂಚನೆ ಸಲಹೆ ಕೊಟ್ಟಿದ್ದು, ತಪಾಸಣೆಯನ್ನು ಐಸಿಎಂಆರ್ ಮಾರ್ಗಸೂಚಿಯಂತೆ ಮಾಡಬೇಕು. 60 ವರ್ಷ ಮೇಲ್ಪಟ್ಟ ಮೇಲೆ ಹೆಚ್ಚಿನ ಕಾಳಜಿವಹಿಸಬೇಕು. ಪಾಸಿಟಿವ್ ಬರುವ ಬಗ್ಗೆ ಹೆಚ್ಚಿನ ಚಿಂತನೆ ಬೇಡ. ಪ್ರತಿ ಜಿಲ್ಲಾಕೇಂದ್ರ ಹಾಗೂ ಗ್ರಾಮಗಳಲ್ಲೂ ವಾರ್ ರೂಮ್ ಸ್ಥಾಪಿಸಬೇಕು ಎಂದು ಸೂಚನೆ ಕೊಟ್ಟಿದ್ದೇನೆ" ಎಂದಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದು, ಲಸಿಕೆ ಪಡೆದುಕೊಳ್ಳದವರ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಆದರೆ ಸಾವಿನ ಪ್ರಮಾಣ ಕಡಿಮೆ ಇದೆ ಎಂದು ಹೇಳಿದ್ದಾರೆ.