ಬೆಳಗಾವಿ, ಜ 18 (DaijiworldNews/MS): ಮೈಲಿ ಬೇನೆ, ಧಡಾರ ರೋಗ ನಿಯಂತ್ರಣಕ್ಕೆ ನೀಡುವ ರುಬೆಲ್ಲಾ ಚುಚ್ಚುಮದ್ದು ಪಡೆದ ಮೂರು ಕಂದಮ್ಮಗಳ ಸಾವಿಗೆ ವೈದ್ಯಕೀಯ ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ (ಆರ್ಸಿಹೆಚ್ಒ) ಈಶ್ವರಪ್ಪ ಗಡದ್ ಅವರು ಹೇಳಿದ್ದಾರೆ.
ಜನವರಿ 11 ಮತ್ತು 12 ರಂದು ಬೋಚಬಾಳ ಗ್ರಾಮಕ್ಕೆ ಭೇಟಿ ನೀಡಿದ್ದ ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಮಕ್ಕಳಿಗೆ ರುಬೆಲ್ಲಾ ಚುಚ್ಚು ಮದ್ದು ನೀಡಿದ್ದರು.ಚುಚ್ಚು ಮದ್ದು ಹಾಕಿಸಿಕೊಂಡು ಮನೆಗೆ ಹೋಗಿದ್ದ ಮಕ್ಕಳಲ್ಲಿ ಐವರು ಮಕ್ಕಳು ವಾಂತಿ ಭೇದಿಯಿಂದ ತೀವ್ರ ಅಸ್ವಸ್ಥಗೊಂಡಿದ್ದರು. ಅವರನ್ನು ಮುನವಳ್ಳಿ ಹಾಗೂ ರಾಮದುರ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ನಾಲ್ಕು ಮಕ್ಕಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ರಾಮದುರ್ಗ ತಾಲೂಕಿನ ಬೋಚಬಾಳ ಗ್ರಾಮದ ಪವಿತ್ರಾ ಹುಲಗೂರ (13 ತಿಂಗಳು), ಮಧು ಕರಗುಂದಿ (14 ತಿಂಗಳು) ಹಾಗೂ ಮಲ್ಲಾಪುರ ಗ್ರಾಮದ ಚೇತನ ಪೂಜಾರಿ (1.5 ವರ್ಷ ) ಮೂವರು ಕಂದಮ್ಮ ಅಸುನೀಗಿತ್ತು.
ಮಕ್ಕಳಿಗೆ ನೀಡುವ ಲಸಿಕೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ಐಎಲ್ಆರ್ ರೆಫ್ರಿಜರೇಟರ್ ನಲ್ಲಿಯೇ ಇಡಬೇಕು. 2 ರಿಂದ 8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಲಸಿಕೆ ಇಡಬೇಕು. ಆರೋಗ್ಯ ಸಿಬ್ಬಂದಿಗಳು ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಜ.10ರಂದು ಲಸಿಕೆ ಸಂಗ್ರಹಿಸಿದ್ದಾರೆ. ಬಳಿಕ ಬಳಕೆಯಾಗದ ಲಸಿಕೆಯನ್ನೂ ಇದೇ ದಿನ ಹಿಂತಿರುಗಿಸಬೇಕಿತ್ತು. ಆದರೆ, ಲಸಿಕೆಯನ್ನು ಹಿಂತಿರುಗಿಸದೆ ಹಳೆಯ ಲಸಿಕೆಯಿಟ್ಟಿದ್ದ ಬಾಕ್ಸ್ ನಲ್ಲಿಯೇ ಲಸಿಕೆಗಳನ್ನು ಇಟ್ಟಿದ್ದಾರೆ. ನಂತರ ಜನವರಿ 11 ಮತ್ತು 12 ರಂದು ಮಕ್ಕಳಿಗೆ ಲಸಿಕೆಗಳನ್ನು ನೀಡಿದ್ದಾರೆ. ಸಿಬ್ಬಂದಿಗಳ ನಿರ್ಲಕ್ಷ್ಯ ವರ್ತನೆಯಿಂದಾಗಿ ಮುಗ್ಧ ಮಕ್ಕಳು ಪ್ರಾಣ ತೆತ್ತಿದ್ದಾರೆಂದು ಹೇಳಿದ್ದಾರೆ.
ಪ್ರಾಥಮಿಕ ತನಿಖಾ ವರದಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ, ನರ್ಸ್ ಹಾಗೂ ಫಾರ್ಮಸಿಸ್ಟ್ ನ ನಿರ್ಲಕ್ಷ್ಯದಿಂದ ಮಕ್ಕಳ ಸಾವು ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ಕುರಿತ ವೈದ್ಯಕೀಯ ಈಗಾಗಲೇ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸಲ್ಲಿಕೆಯಾಗಿದ್ದು, ಸಿಬ್ಬಂದಿಗಳು ಲಸಿಕೆ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ವರದಿ ಕೇಳಿದ ಸಿಎಂ ಬೊಮ್ಮಾಯಿ
ಈ ನಡುವೆ ಮೂವರು ಮಕ್ಕಳ ಸಾವಿನ ಕುರಿತು ವಿಸ್ತೃತ ವರದಿ ನೀಡುವಂತೆ ಬೆಳಗಾವಿ ಜಿಲ್ಲಾಧಿಕಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಸೂಚಿಸಿದ್ದಾರೆ.