ಬೆಂಗಳೂರು, ಜ 17 (DaijiworldNews/HR): ಕೇರಳ ರಾಜ್ಯದಿಂದ ಈ ಬಾರಿಯ ಗಣರಾಜ್ಯೋತ್ಸವ ಪೆರೆಡ್ನಲ್ಲಿ ಭಾಗವಹಿಸಲು ಕಳುಹಿಸಲಾಗಿದ್ದ ನಾರಾಯಣ ಗುರು ಅವರ ಚಿತ್ರವಿದ್ದ ಸ್ತಬ್ಧಚಿತ್ರವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ್ದು, ಕೇಂದ್ರದ ಈ ನಡೆಗೆ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಗಣರಾಜ್ಯೋತ್ಸವ ಪೆರೆಡ್ಗೆ ನೇತಾಜಿ ಸ್ತಬ್ಧಚಿತ್ರ ತಿರಸ್ಕರಿಸಿದ ಕೇಂದ್ರದ ನಡೆ ಅತ್ಯಂತ ಅಸಹ್ಯಕಾರಿ ನಡೆ. ಕೇವಲ ರಾಜಕೀಯ ಕಾರಣಕ್ಕಾಗಿ ದೇಶಕ್ಕಾಗಿ ಹುತಾತ್ಮರಾದ ನೇತಾಜಿಯವರನ್ನು ಅವಮಾನಿಸಿದ್ದು ಖಂಡನೀಯ. ಮೋದಿಯವರೆ, ನೀವು ಪ್ರಧಾನಿಯಾಗಿ ದ್ವೇಷದ ರಾಯಭಾರಿ ಆಗಬೇಡಿ, ಪ್ರೀತಿಯ ಸಂದೇಶ ಸಾರುವ ಪಾರಿವಾಳವಾಗಿ ಎಂದಿದ್ದಾರೆ.
ಇನ್ನು "ಸಮಾಜ ಸುಧಾರಕ ನಾರಾಯಣ ಗುರು ಸ್ತಬ್ಧಚಿತ್ರ ಪ್ರದರ್ಶನವನ್ನು ಕೇಂದ್ರ ತಿರಸ್ಕರಿಸಿದೆ. ಜೊತೆಗೆ ಪ.ಬಂಗಾಳ ಕಳಿಸಿದ್ದ ನೇತಾಜಿ ಸ್ತಬ್ದಚಿತ್ರವನ್ನೂ ತಿರಸ್ಕರಿಸಿದೆ. ಹುತಾತ್ಮ ನೇತಾಜಿ ಹಾಗೂ ಸಾಮಾಜ ಸುಧಾರಕ ನಾರಾಯಣ ಗುರುಗಳ ಬಗ್ಗೆ ಕೇಂದ್ರಕ್ಕೆ ಅಷ್ಟೊಂದು ತಿರಸ್ಕಾರ ಯಾಕೆ" ಎಂದು ಪ್ರಶ್ನಿಸಿದ್ದಾರೆ.
ನಾರಾಯಣ ಗುರು, ನಮ್ಮ ಬಸವಣ್ಣರ ಇನ್ನೊಂದು ಅವತಾರ. ಅಸ್ಪೃಶ್ಯತೆಯ ವಿರುದ್ಧ ನಾರಾಯಣ ಗುರು ಕೇರಳದಲ್ಲಿ ಕ್ರಾಂತಿಯನ್ನೇ ಮಾಡಿದ್ದರು. ಆದರೆ ಯಥಾಸ್ಥಿತಿವಾದಿ ಹಾಗೂ ಮೂಲಭೂತವಾದಿಯವರಿಗೆ ನಾರಾಯಣ ಗುರುಗಳ ಕಾಯಕ ಅಪಥ್ಯವಾಗಿತ್ತು. ಆ ಯಥಾಸ್ಥಿತಿವಾದಿಗಳ ಸಂತತಿಯಾಗಿರುವ ಬಿಜೆಪಿ ಈಗ ನಾರಾಯಣ ಗುರುಗಳ ಸ್ತಬ್ಧಚಿತ್ರ ತಿರಸ್ಕರಿಸಿ ವಿಕೃತಿ ತೋರಿಸಿದೆ ಎಂದು ಅವರು ಕಿಡಿಕಾರಿದ್ದಾರೆ.