ಲಖನೌ, ಜ 14 (DaijiworldNews/HR): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂಪುಟದ ಮಾಜಿ ಸಚಿವರಾದ ಸ್ವಾಮಿ ಪ್ರಸಾದ್ ಮೌರ್ಯ ಹಾಗೂ ಧರಂ ಸಿಂಗ್ ಸೈನಿ ಅವರು ಇಂದು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಸ್ವಾಮಿ ಪ್ರಸಾದ್ ಮೌರ್ಯ, ಧರಂ ಸಿಂಗ್ ಸೈನಿ ಸೇರಿದಂತೆ ಬಿಜೆಪಿ ತೊರೆದಿದ್ದ ಐವರು ಶಾಸಕರಾದ ರೋಷನ್ ಲಾಲ್ ವರ್ಮಾ, ಭಗವತಿ ಸಾಗರ್, ಬ್ರಿಜೇಶ್ ಪ್ರಜಾಪತಿ, ವಿನಯ್ ಶಾಕ್ಯಾ ಹಾಗೂ ಮುಖೇಶ್ ವರ್ಮಾ ಅಖಿಲೇಶ್ ಯಾದವ್ ಅವರು ತಮ್ಮ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.
ಇನ್ನು ಇದೇ ವೇಳೆ ಅಪ್ನಾ ದಳದ ಶಾಸಕ ಅಮರ್ ಸಿಂಗ್ ಚೌಧರಿ ಸಹ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ವೇಳೆ ಸಮಾರಂಭದಲ್ಲಿ ಮಾತನಾಡಿದ ಸೈನಿ, ಸಂವಿಧಾನ, ಪ್ರಜಾಪ್ರಭುತ್ವ ಮತ್ತು ದಲಿತರ ಹಿತಾಸಕ್ತಿ ಉಳಿಸಲು ನಾವೆಲ್ಲರೂ ಇಂದು ಎಸ್ಪಿಗೆ ಸೇರುತ್ತಿದ್ದು, ಅಖಿಲೇಶ್ ಯಾದವ್ ಅವರನ್ನು ಮುಂದಿನ ಸಿಎಂ ಮಾಡುತ್ತೇವೆ ಎಂದಿದ್ದಾರೆ.