ಲಕ್ನೋ, ಜ.12 (DaijiworldNews/PY): ನನ್ನ ತಂದೆ ಹಾಗೂ ಬಿಜೆಪಿ ಶಾಸಕ ವಿನಯ್ ಶಕ್ಯಾ ಅವರನ್ನು ಚಿಕ್ಕಪ್ಪ ಹಾಗೂ ಅಜ್ಜಿ ಔರಿಯಾದಿಂದ ಲಕ್ನೋಗೆ ಕರೆದುಕೊಂಡು ಹೋದ ಬಳಿಕ ತಂದೆ ನಾಪತ್ತೆಯಾಗಿದ್ದಾರೆ ಎಂದು ಶಾಸಕರ ಪುತ್ರಿ ದೂರು ನೀಡಿದ್ದಾರೆ. ಆದರೆ, ಶಾಸಕ ವಿನಯ್ ಶಕ್ಯಾ ಎತ್ವಾದ ಮನೆಯಲ್ಲಿ ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಹಾಗೂ ಇತರ ಮೂವರು ಶಾಸಕರು ಬಿಜೆಪಿಗೆ ರಾಜೀನಾಮೆ ನೀಡಿ ಸಮಾಜವಾದಿ ಪಕ್ಷಕ್ಕೆ ಸೇರಿರುವ ಮಾದರಿಯಲ್ಲೇ ಶಕ್ಯಾ ಕೂಡಾ ಸಮಾಜವಾದಿ ಪಕ್ಷಕ್ಕೆ ಸೇರಿರುವ ಬೆನ್ನಲ್ಲೇ, ಶಾಸಕರ ಪುತ್ರಿ ಚಿಕ್ಕಪ್ಪ ದೇವೇಶ್ ಶಕ್ಯಾ ಹಾಗೂ ಅಜ್ಜಿ ತಂದೆಯನ್ನು ಲಕ್ನೋಗೆ ಕರೆದೊಯ್ದ ಬಳಿಕ ತಂದೆ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ರಿಯಾ ತನ್ನ ತಂದೆಯನ್ನು ಪತ್ತೆಹಚ್ಚುವಂತೆ ಉತ್ತರಪ್ರದೇಶ ಸರ್ಕಾರವನ್ನು ಒತ್ತಾಯಿಸಿರುವ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ರಿಯಾ ಆರೋಪ ಮಾಡಿದ ಬೆನ್ನಲ್ಲೇ, ಔರಿಯಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ವರ್ಮಾ ಪ್ರತಿಕ್ರಿಯಿಸಿದ್ದು, "ಬಿಜೆಪಿ ಶಾಸಕ ತಮ್ಮ ತಾಯಿಯ ಜೊತೆ ಎತ್ವಾ ಶಾಂತಿ ಕಾಲನಿಯ ನಿವಾಸದಲ್ಲಿ ಸುರಕ್ಷಿತವಾಗಿದ್ದಾರೆ" ಎಂದಿದ್ದಾರೆ.
"ಅವರನ್ನು ಅಪಹರಣ ಮಾಡಲಾಗಿದೆ ಎನ್ನುವ ಆರೋಪ ಆಧಾರರಹಿತ ಮತ್ತು ಅಸತ್ಯವಾಗಿದೆ. ಈ ವಿಚಾರ ಕುಟುಂಬದ ವ್ಯಾಜ್ಯವಾಗಿದೆ. ನಾನೇ ಶಾಸಕರೊಂದಿಗೆ ವೀಡಿಯೊ ಕರೆಯಲ್ಲಿ ಮಾತನಾಡಿದ್ದೇನೆ. ಡಿಎಸ್ಪಿ ಮಟ್ಟದ ಅಧಿಕಾರಿಯೂ ಅಲ್ಲಿದ್ದಾರೆ" ಎಂದು ತಿಳಿಸಿದ್ದಾರೆ.
"2018 ರಲ್ಲಿ ಮೆದುಲಿನ ಪಾರ್ಶ್ವವಾಯುವಿಗೆ ಒಳಗಾದ ನಂತರ ತನ್ನ ತಂದೆಗೆ ಸ್ಪಷ್ಟವಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ" ಎಂದು ರಿಯಾ ವಿಡಿಯೋದಲ್ಲಿ ಹೇಳಿದ್ದಾರೆ.
"ಚುನಾವಣೆ ಸಮೀಪಿಸುತ್ತಿರುವ ಕಾರಣ ನಾವು ಬಿಜೆಪಿ ಪರ ಕೆಲಸ ಮಾಡುತ್ತಿದ್ದೇವೆ. ನಮ್ಮ ಕುಟುಂಬ ಸದಸ್ಯರಿಗೆ ತಂದೆಯನ್ನು ಭೇಟಿ ಮಾಡಲು ಅವಕಾಶ ನೀಡಬೇಕು ಎಂದು ನಾನು ಸರ್ಕಾರಕ್ಕೆ ಒತ್ತಾಯಿಸುತ್ತೇನೆ" ಎಂದಿದ್ದಾರೆ.