ಹುಬ್ಬಳ್ಳಿ, ಅ 26 (DaijiworldNews/MS): ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸೋಲುವ ಸಮಯದಲ್ಲಿ ಕುರಿ ಬಲಿ ಕೊಟ್ಟ ಹಾಗೆ, ಅಲ್ಪಸಂಖ್ಯಾತರನ್ನ ಬಲಿ ಕೊಡ್ತಾರೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ಗೆಲ್ಲುವ ಸಮಯದಲ್ಲಿ ಕುಮಾರಸ್ವಾಮಿಗೆ ಅಲ್ಪಸಂಖ್ಯಾತರು ಏಕೆ ನೆನಪು ಬರುವುದಿಲ್ಲ? ಅಂದು ಯಡಿಯೂರಪ್ಪನವರಿಗೆ ಅಧಿಕಾರ ಕೊಡಿ ಎಂದು ನಾನು ಕುಮಾರಸ್ವಾಮಿಗೆ ಹೇಳಿದ್ದೆ. ಆದರೆ ಎಲ್ಲಿ ಹೆಚ್.ಡಿ.ರೇವಣ್ಣ ಅವರು ಉಪ ಮುಖ್ಯಮಂತ್ರಿ ಆಗುತ್ತಾರೋ ಅಂದುಕೊಂಡು ಯಡಿಯೂರಪ್ಪನವರಿಗೆ ಅಧಿಕಾರ ಬಿಟ್ಟು ಕೊಡಲಿಲ್ಲ ಕುಮಾರಸ್ವಾಮಿ ಸ್ವಂತ ಸಹೋದರನ ಏಳಿಗೆಯನ್ನ ಸಹಿಸಿಕೊಳ್ಳುವುದಿಲ್ಲ, ನಮ್ಮ ಏಳಿಗೆಯನ್ನ ಅವರು ಸಹಿಸಿಕೊಳ್ಳುವುದು ದೂರದ ಮಾತು ಎಂದು ವ್ಯಂಗ್ಯವಾಡಿದ್ದಾರೆ.
ಮುಖ್ಯಮಂತ್ರಿ ಪಟ್ಟಕ್ಕಾಗಿ ಕುಮಾರಸ್ವಾಮಿ ಬಿಜೆಪಿ ಪಕ್ಷದೊಂದಿಗೆ ಒಪ್ಪಂದ ಮಾಡಿಕೊಂಡ ನಾನು ಬಲವಾಗಿ ವಿರೋಧ ಮಾಡಿದ್ದೆ. ಮಾತ್ರವಲ್ಲದೆ ಮನೆಯಲ್ಲಿ ಕುಳಿತು ಕಣ್ಣೀರು ಸಹ ಹಾಕಿದ್ದೇನೆ. ಆದರೆ ಕೊನೆಯ ಸಮಯದಲ್ಲಿ ನಾನು ಅನಿವಾರ್ಯವಾಗಿ ಹೋಗಬೇಕಾಯಿತು. ಕುಮಾರಸ್ವಾಮಿ ಯಾರು ಬೆಳೆಯುವದನ್ನ ಸಹಿಸಿಕೊಳ್ಳುವುದಿಲ್ಲ. ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿದ ಅಭ್ಯರ್ಥಿಗಳನ್ನ ಸೋತ ನಂತರ ಬೀದಿ ಪಾಲು ಮಾಡುತ್ತಾರೆ ಎಂದು ಆರೋಪಿಸಿದ್ದಾರೆ.
ರಾಮನಗರ , ಚನ್ನಪಟ್ಟಣದಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಬೇಕಿತ್ತು. ರಾಜಕೀಯವಾಗಿ ಮುಸ್ಲಿಮರನ್ನು ಬಲಿಕೊಡುವ ಉದ್ದೇಶದಿಂದ ಹಾನಗಲ್, ಸಿಂದಗಿಯಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಿದ್ದಾರೆ ಆರ್ ಎಸ್ಎಸ್ ನಿಂದಲೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಸೂಟ್ ಕೇಸ್ ಬಂದಿರಬಹುದು. ಹೀಗಾಗಿ ಆರ್ ಎಸ್ಎಸ್ ಗೆ ಬೈದರೆ ಮುಸ್ಲಿಂ ಮತಗಳು ವಿಭಜನೆ ಮಾಡಬಹುದು ಜಮೀರ್ ಅಹ್ಮದ್ ಖಾನ್ ಎಂದು ಆರೋಪಿಸಿದ್ದಾರೆ.