ಬೆಂಗಳೂರು, ಅ 18(DaijiworldNews/MS): ದೇಶದಲ್ಲಿ ಆನ್ಲೈನ್ ವಹಿವಾಟು ಹೆಚ್ಚಾಗುತ್ತಿದ್ದಂತೆಯೇ ಸೈಬರ್ ಕಳ್ಳರು ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುವುದು ಹೆಚ್ಚಾಗುತ್ತಿದೆ. ಇದೀಗ ನಿವೃತ್ತ ಐಪಿಎಸ್ ಅಧಿಕಾರಿ ಬ್ಯಾಂಕ್ ಅಕೌಂಟ್ ನಿಂದ ಹಣ ಎಗರಿಸಿದ್ದಾರೆ. ಈ ಸಂಬಂಧ ಅಕ್ಟೋಬರ್ 11 ರಂದು ಮಾಜಿ ಮಹಾನಿರ್ದೇಶಕ ಮತ್ತು ಪೊಲೀಸ್ ಇನ್ಸ್ಪೆಕ್ಟರ್ ಜನರಲ್ (ಡಿಜಿ ಮತ್ತು ಐಜಿಪಿ) ಶಂಕರ್ ಎಂ ಬಿದರಿ ನೀಡಿದ ದೂರಿನ ಆಧಾರದ ಮೇಲೆ ಆಗ್ನೇಯ ಸಿಇಎನ್ ಅಪರಾಧ ಪೊಲೀಸರು ಅಜ್ಞಾತ ದುಷ್ಕರ್ಮಿಗಳ ವಿರುದ್ಧ ವಂಚನೆ ಮತ್ತು ಸೈಬರ್ ಅಪರಾಧದ ಪ್ರಕರಣ ದಾಖಲಿಸಿದ್ದಾರೆ.
ಶಂಕರ್ ಎಂ ಬಿದರಿ ಅವರಿಗೆ ಬ್ಯಾಂಕ್ ಪ್ರತಿನಿಧಿ ಎಂದು ಪರಿಚಯಿಸಿಕೊಂಡ ಪಾನ್ ಕಾರ್ಡ್ ನಂ. ಲಿಂಕ್ ಮಾಡಬೇಕೆಂದು ಕರೆ ಮಾಡಿದ್ದಾರೆ. ಮಾಡದೇ ಇದ್ದರೆ ಬ್ಯಾಂಕ್ ಅಕೌಂಟ್ ಸ್ಥಗಿತವಾಗುವುದಾಗಿ ತಿಳಿಸಿದ್ದಾರೆ. ಬಳಿಕ ಮೊಬೈಲ್ ಗೆ ಬರುವ ಮೇಸೆಜ್ ನ ಓಟಿಪಿ ನಂ. ಕೇಳಿದ್ದಾರೆ. ಓಟಿಪಿ ನಂಬರ್ ಹೇಳಿದ ಕೆಲವೇ ಕ್ಷಣಗಳಲ್ಲಿ ಶಂಕರ್ ಬಿದರಿ ಅಕೌಂಟ್ ನಲ್ಲಿದ್ದ 89 ಸಾವಿರ ಹಣ ಕಡಿತವಾಗಿದೆ
ಶಂಕಿತರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 420 (ವಂಚನೆ) ಅಡಿಯಲ್ಲಿ ಸೆಕ್ಷನ್ 66ಸಿ (ಗುರುತಿನ ಕಳ್ಳತನಕ್ಕೆ ಶಿಕ್ಷೆ) ಮತ್ತು 66ಡಿ (ಕಂಪ್ಯೂಟರ್ ಸಂಪನ್ಮೂಲಗಳನ್ನು ಬಳಸಿಕೊಂಡು ವ್ಯಕ್ತಿ ವಂಚನೆಗಾಗಿ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.