ಬೆಂಗಳೂರು, ಅ.17 (DaijiworldNews/PY): "ಮುಜರಾಯಿ ದೇವಸ್ಥಾನಗಳನ್ನು ಭಕ್ತರ ಸುಪರ್ದಿಗೆ ನೀಡಬೇಕು ಎಂಬ ಮೋಹನ್ ಭಾಗವತ್ ಹೇಳಿಕೆಯಲ್ಲಿ ಅರ್ಥವಿಲ್ಲ" ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಮುಜರಾಯಿ ದೇವಸ್ಥಾನಗಳನ್ನು ಭಕ್ತರ ಸುಪರ್ದಿಗೆ ನೀಡಬೇಕು ಎಂಬ ಮೋಹನ್ ಭಾಗವತ್ ಹೇಳಿಕೆಯಲ್ಲಿ ಅರ್ಥವಿಲ್ಲ. ಇದು ಪೂಜಾವೃತ್ತಿಯನ್ನು ನಂಬಿರುವ ಅಸಂಖ್ಯಾತ ಅರ್ಚಕ ಸಮುದಾಯದ ಬದುಕಿನ ಮೇಲೆ ಪರಿಣಾಮ ಬೀರಲಿದೆ. ಖಾಸಗಿ ವ್ಯಕ್ತಿಗಳಿಗೆ ದೇಗುಲ ನಿರ್ವಹಣೆ ನೀಡಿದರೆ ಅರ್ಚಕರ ಬದುಕಿಗೆ ಭದ್ರತೆ ಒದಗಿಸುವರ್ಯಾರು?" ಎಂದು ಪ್ರಶ್ನಿಸಿದ್ದಾರೆ.
"ನಮ್ಮ ರಾಜ್ಯವೊಂದರಲ್ಲೇ ಎಬಿಸಿ ಕೆಟಗರಿಯ 36 ಸಾವಿರ ದೇವಸ್ಥಾನಗಳಿವೆ. ಇವುಗಳ ಆಸ್ತಿ ಮೌಲ್ಯ ಸುಮಾರು 10 ಲಕ್ಷ ಕೋಟಿ. ಈ ದೇವಸ್ಥಾನಗಳ ಸುಪರ್ದಿ ಖಾಸಗಿ ವ್ಯಕ್ತಿಗಳ ಪಾಲಾದರೆ ದೇಗುಲದ ಆಸ್ತಿಗಳ ರಕ್ಷಣೆಯ ಹೊಣೆ ಯಾರದ್ದು? ಇದು ಭೂ ಅವ್ಯವಹಾರಕ್ಕೆ ಆಸ್ಪದ ನೀಡಿದಂತಲ್ಲವೆ? ಹಾಗಾಗಿ ದೇಗುಲಗಳ ನಿರ್ವಹಣೆ ಸರ್ಕಾರದ ಬಳಿಯೇ ಇರುವುದು ಸಮಂಜಸ" ಎಂದಿದ್ದಾರೆ.
"ಭಾಗವತ್ರ ಹೇಳಿಕೆಯನ್ನು ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಹಾಗೂ ಉಪಾಧಿವಂತರ ಒಕ್ಕೂಟದ ಅಧ್ಯಕ್ಷನಾಗಿ ಖಂಡಿಸುತ್ತೇನೆ. ಅರ್ಚಕ ವೃತ್ತಿ ಲಾಭದಾಯಕ ವೃತ್ತಿಯಲ್ಲ. ಅರ್ಚಕರಿಗೆ ಸಂಭಾವನೆಯೂ ಇಲ್ಲ. ಭಾಗವತ್ರ ಹೇಳಿಕೆ ಅರ್ಚಕರಷ್ಟೇ ಅಲ್ಲದೆ, ದೇವಸ್ಥಾನಕ್ಕೆ ಸಂಬಂಧಪಟ್ಟ ಲಕ್ಷಾಂತರ ಹೊರಾಂಗಣ ನೌಕರರ ಬದುಕಿಗೂ ಕೊಳ್ಳಿ ಇಡಲಿದೆ" ಎಂದು ಕಿಡಿಕಾರಿದ್ದಾರೆ.