ನವದೆಹಲಿ, ಜು 23 (DaijiworldNews/PY): ಭಾರತದಲ್ಲಿ ಕೊರೊನಾ ಮರಣ ಪ್ರಮಾಣ ದಾಖಲು ಮಾಡುವಲ್ಲಿ ಲೋಪ ಆಗಿದೆ ಎನ್ನುವ ವರದಿಗಳನ್ನು ಕೇಂದ್ರ ಸರ್ಕಾರ ಅಲ್ಲಗಳೆದಿದ್ದು, ದೃಢವಾದ ಹಾಗೂ ಕಾನೂನು ಆಧಾರಿತ ಮರಣ ನೋಂದಣಿ ವ್ಯವಸ್ಥೆ ದೇಶದಲ್ಲಿ ಇದೆ ಎಂದಿದೆ.
"ಸಾಂಕ್ರಾಮಿಕ ರೋಗ ಹಾಗೂ ಅದರ ನಿರ್ವಹಣೆಯ ತತ್ವಗಳ ಪ್ರಕಾರ, ಕೆಲ ಪ್ರಕರಣಗಳು ಪತ್ತೆಯಾಗುವುದಿಲ್ಲವಾದರೂ, ದಾಖಲಾತಿಯಲ್ಲಿ ತಪ್ಪು ಆಗುವುದು ಅಸಂಭವ. ಎಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಸಂಭವಿಸಿದ ಸಾವಿನ ಲೆಕ್ಕವನ್ನು ಹಲವು ರಾಜ್ಯಗಳು ಪರಿಷ್ಕರಿಸುತ್ತಿವೆ" ಎಂದು ಆರೋಗ್ಯ ಸಚಿವಾಲಯ ಹೇಳಿದೆ.
"ಹೆಚ್ಚುವರಿ ಮರಣದ ಅಂಕಿ-ಅಂಶಗಳನ್ನು ಕೊರೊನಾ ಸಾವು ಎಂದು ವರದಿ ಅಂದಾಜಿಸಿದೆ. ಆದರೆ, ಆ ವಿಚಾರ ಸತ್ಯವನ್ನು ಆಧರಿಸಿಲ್ಲ ಹಾಗೂ ಸಂಪೂರ್ಣ ತಪ್ಪು" ಎಂದು ಸಚಿವಾಲಯ ಹೇಳಿದೆ.
ದೇಶದಲ್ಲಿ ಪ್ರತಿನಿತ್ಯ ಹೊಸ ಕೊರೊನಾ ಪ್ರಕರಣಗಳು ಹಾಗೂ ಸಾವುಗಳ ವರದಿಯ ಮೂಲದಿಂದ ವರದಿಯಾಗುವ ವಿಧಾನವನ್ನು ಅನುಸರಿಸಿದೆ. ರಾಜ್ಯ ಸರ್ಕಾರಗಳಿಗೆ ಜಿಲ್ಲೆಗಳು ಹಾಗೂ ಕೇಂದ್ರ ಸಚಿವಾಲಯಕ್ಕೆ ರಾಜ್ಯಗಳು ಸಾವಿನ ಸಂಖ್ಯೆಯನ್ನು ವರದಿ ಮಾಡುತ್ತವೆ ಎಂದು ಮಾಹಿತಿ ನೀಡಿದೆ.
ಸೆಂಟರ್ ಫಾರ್ ಗ್ಲೋಬಲ್ ಡೆವಲಪ್ಮೆಂಟ್ ನೀಡಿದ ವರದಿಯ ಹಿನ್ನಲೆ ಕೇಂದ್ರ ಈ ಸ್ಪಷ್ಟನೆ ನೀಡಿದೆ. ಕೊರೊನಾ ಎರಡನೇ ಅಲೆಯ ವೇಳೆ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದ ಸಂದರ್ಭ ಸಂಭವಿಸಿರುವ ನೈಜ ಸಾವುಗಳು ಸಾವಿರವಲ್ಲ, ಲಕ್ಷಗಳ ಲೆಕ್ಕದಲ್ಲಿವೆ. ಅಧಿಕೃತ ಲೆಕ್ಕಾಚಾರದಲ್ಲಿ ವ್ಯತ್ಯಾಸವಾಗಿರುವ ಸಾಧ್ಯತೆ ಇದೆ ಎದು ವರದಿ ಹೇಳಿತ್ತು.
ವಿರೋಧ ಪಕ್ಷಗಳು ಅರವಿಂದ್ ಸುಬ್ರಮಣಿಯನ್ ಹಾಗೂ ಇತರ ಇಬ್ಬರು ಸಂಶೋಧಕರು ಪ್ರಕಟಿಸಿದ ಸಿಜಿಡಿ ವರದಿಯ ಅಂಶಗಳನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ನೈಜ ಕೊರೊನಾ ಸಾವಿನ ಅಂಕಿ-ಅಂಶಗಳನ್ನು ಮರೆಮಾಚಲು ಪ್ರಯತ್ನಿಸುತ್ತಿವೆ ಎಂದು ದೂರಿವೆ.