ಬೆಂಗಳೂರು, ಜು 03 (DaijiworldNews/MS): ಕೇಂದ್ರ ಸಚಿವ ಸದಾನಂದಗೌಡರಿಗೂ 'ಸಿಡಿ' ಭೀತಿ ಶುರುವಾಗಿದೆಯಾ? ಹೀಗೊಂದು ಪ್ರಶ್ನೆ ಉದ್ಬವಿಸಲು ಸಿಟಿ ಸಿವಿಲ್ ಕೋರ್ಟ್ನಿಂದ ತಮ್ಮ ವಿರುದ್ದ ಯಾವುದೇ ಮಾನಹಾನಿಕರ ವರದಿ ಮಾಡದಂತೆ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಪಡೆದುಕೊಂಡಿರುವ ಸಚಿವ ನಡೆ ಕಾರಣವಾಗಿದೆ.
ಪತ್ರಿಕೆ, ಚಾನೆಲ್ ಗಳಲ್ಲಿ ಸುಳ್ಳು ಸುದ್ದಿ ಪ್ರಸಾರ ಮಾಡದಂತೆ, ನಕಲಿ ಸಿಡಿ ಸೃಷ್ಟಿಸಿ ಬಿಡುಗಡೆ ಮಾಡದಂತೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಮಾಧ್ಯಮಗಳ ವಿರುದ್ಧ 'ನಿರ್ಬಂಧಕಾಜ್ಞೆ' ಪಡೆದಿದ್ದಾರೆ.
ಕೇಂದ್ರ ಸಚಿವ ಸಂಪುಟ ಪುನಾರಚನೆ ಸಂದರ್ಭದಲ್ಲಿ ತಮ್ಮ ವಿರುದ್ದ, ಕೆಲ ಪತ್ರಿಕೆ, ಚಾನಲ್ಗಳಲ್ಲಿ ತಮ್ಮ ವಿರುದ್ಧ ಸುಳ್ಳುಸುದ್ದಿ ಪ್ರಸಾರ ಮಾಡುವ ಸಾಧ್ಯತೆ ಇದೆ. ಅಲ್ಲದೆ ಕಿಡಿಗೇಡಿಗಳು ನಕಲಿ ಸಿಡಿ ಸೃಷ್ಟಿಸಿ ಮಾಧ್ಯಮಗಳಲ್ಲಿ ಹರಿಬಿಡುವ ಸಾಧ್ಯತೆಯೂ ಇದೆ ಎಂದು ಕಾರಣ ನೀಡಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಕೆಲ ಹಳೆಯ ದೃಷ್ಟಾಂತಗಳ ಉದಾಹರಣೆಯನ್ನೂ ನೀಡಿರುವ ಅವರು, ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ, ಬ್ರಿಟನ್ ರಾಣಿ ಕ್ವೀನ್ ಎಲಿಜಬೆತ್ ಕುರಿತು ನಕಲಿ ವಿಡಿಯೋ ಮಾಡಲಾಗಿತ್ತು ಎಂದು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಇಂಥ ವಿಡಿಯೋ ಪ್ರಸಾರ ಮಾಡಿದರೆ ಘನತೆಗೆ ಧಕ್ಕೆ ಹಾಗೂ ಚಾರಿತ್ರ್ಯ ವಧೆಯಾಗಲಿದೆ. ಆದ್ದರಿಂದ ತಮ್ಮ ಬಗ್ಗೆಯೂ ಇಂತಹ ವಿಡಿಯೋ ಪ್ರಸಾರ ಮಾಡುವ ಅಪಾಯವಿದ್ದು, ಹಾಗಾದಲ್ಲಿ ಘನತೆಗೆ ಧಕ್ಕೆಯಾಗಲಿದೆ. ಚಾರಿತ್ರ್ಯ ವಧೆಯಾಗಲಿದೆ ಎಂದು ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ಮಾನ್ಯ ಮಾಡಿದ ಕೋರ್ಟ್, ಮಾನಹಾನಿಕರ ವರದಿ ಮಾಡದಂತೆ ನಿರ್ಬಂಧ ವಿಧಿಸಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಹಗರಣ ಹೊರಬಿದ್ದಾಗ, ಸಚಿವರಾದ ಶಿವರಾಮ ಹೆಬ್ಬಾರ್, ಬಿ.ಸಿ.ಪಾಟೀಲ್, ಭೈರತಿ ಬಸವರಾಜು, ಕೆ. ಸುಧಾಕರ್, ಎಸ್.ಟಿ ಸೋಮಶೇಖರ್ ಹಾಗು ನಾರಾಯಣ ಗೌಡ ತಮ್ಮ ವಿರುದ್ಧ ಮಾಧ್ಯಮಗಳು ಯಾವುದೇ ವರದಿ ಬಿತ್ತರಿಸಬಾರದು ಎಂದು ಕೋರಿ ನಗರದ 27ನೇ ಸಿಸಿಎಚ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.