ಜೈಪುರ, ಮೇ 05 (DaijiworldNews/MS): ಕೊರೋನಾ ಸೋಂಕಿನಿಂದ ತಂದೆ ಮೃತಪಟ್ಟಿದ್ದರಿಂದ ಆಘಾತಕ್ಕೆ ಒಳಗಾದ ಪುತ್ರಿ ಚಿತೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಹೃದಯವಿದ್ರಾವಕ ಘಟನೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದಿದೆ.
ಕೊರೋನಾ ಸೋಂಕಿಗೆ ಒಳಗಾದ ದಾಮೋದರದಾಸ್ ಶಾರದಾ (73) ಎಂಬವರನ್ನು ಭಾನುವಾರ ಆಪ್ಸತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ರೋಗಿಯ ಸಾವಿನ ನಂತರ, ಆಸ್ಪತ್ರೆಯ ಆಡಳಿತವು ಕೋವಿಡ್ -19 ಪ್ರೋಟೋಕಾಲ್ ಅನ್ನು ಅನುಸರಿಸಿ, ಶವವನ್ನು ಕೊನೆಯ ವಿಧಿಗಳಿಗಾಗಿ ಸಂಬಂಧಿಕರಿಗೆ ಹಸ್ತಾಂತರಿಸಿತು.
ದಾಮೋದರದಾಸ್ ಅವರಿಗೆ ಗಂಡು ಮಕ್ಕಳಿಲ್ಲ. ಮೂವರು ಪುತ್ರಿಯರಿದ್ದಾರೆ. ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸುವ ಸಂದರ್ಭದಲ್ಲಿ ದಾಮೋದರದಾಸ್ ಅವರಿಗೆ ಪುತ್ರರಿಲ್ಲದ ಕಾರಣ ಅವರ ಕಿರಿಯ ಪುತ್ರಿ ಚಂದ್ರಕಲಾ (34) ಸ್ಮಶಾನಕ್ಕೆ ಹೋಗಬೇಕೆಂದು ಪಟ್ಟುಹಿಡಿದಿದ್ದಾರೆ. ತಂದೆಯ ಅಂತ್ಯಕ್ರಿಯೆ ಸಮಯದಲ್ಲಿ ವೇಳೆ ಇದ್ದಕ್ಕಿದ್ದಂತೆ ತಂದೆಯ ಮೃತದೇಹ ಸುಡುವ ಚಿತೆಯ ಬೆಂಕಿಗೆ ಹಾರಿದ್ದಾಳೆ. ಸ್ಥಳದಲ್ಲಿದ್ದ ಜನರು ಕೂಡಲೇ ಆಕೆಯನ್ನು ರಕ್ಷಿಸಿ ಬಾರ್ಮರ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸಾ ನಂತರ ಅವರನ್ನು ಜೋಧಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಂದ್ರಕಲಾ ಅವರಿಗೆ ಶೇಕಡ 70 ರಷ್ಟು ಗಾಯಗಳಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾರೆ.