ಕಾನ್ಪುರ, ಎ.16 (DaijiworldNews/PY): ಕೊರೊನಾ ರೋಗಿಗಳ ಚಿಕಿತ್ಸೆಗೆ ಬಳಸುವ ರೆಮ್ಡಿಸಿವಿರ್ ಚುಚ್ಚುಮದ್ದನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಮೂವರು ವೈದ್ಯಕೀಯ ಪ್ರತಿನಿಧಿಗಳನ್ನು ಶುಕ್ರವಾರ ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಬಂಧಿತರನ್ನು ಪ್ರಶಾಂತ್ ಶುಕ್ಲಾ, ನೌಬಸ್ತಾ ನಿವಾಸಿ ಮೋಹನ್ ಸೋನಿ ಹಾಗೂ ಹರಿಯಾಣದ ಸಚಿನ್ ಕುಮಾರ್ ಎಂದು ಗುರುತಿಸಲಾಗಿದೆ.
"ಮೂವರು ವೈದ್ಯಕೀಯ ಪ್ರತಿನಿಧಿಗಳು ನಗರದಲ್ಲಿ ರೆಮ್ಡಿಸಿವಿರ್ ಚುಚ್ಚುಮದ್ದನ್ನು ಅಧಿಕ ಬೆಲೆಗೆ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಕಾನ್ಪುರ ಪೊಲೀಸರು ಹಾಗೂ ಎಸ್ಟಿಎಫ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇವರನ್ನು ಬಂಧಿಸಲಾಗಿದೆ" ಎಂದು ಅಧಿಕಾರಿ ಹೇಳಿದ್ದಾರೆ.
"ಬಂಧಿತ ಮೂವರೊಂದಿಗೆ ರೆಮ್ಡಿಸಿವಿರ್ ಚುಚ್ಚುಮದ್ದುಗಳನ್ನು ಖರೀದಿಸಿದ ಬಿಲ್ ಇರಲಿಲ್ಲ. ವಶಕ್ಕೆ ಪಡೆದುಕೊಂಡ ಔಷಧಿಯ ಶೀಷೆಗಳ ಮೇಲೆ ಇದ್ದ ಬ್ಯಾಚ್ ಸಂಖ್ಯೆ ಕಾಣೆಯಾಗಿತ್ತು. ಪ್ರಕರಣದ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ. ಕಾಳಸಂತೆಯ ಜಾಲವನ್ನು ಪತ್ತೆ ಹಚ್ಚುವ ಸಲುವಾರು ಮೂವರು ಆರೋಪಿಗಳ ಫೋನ್ ಕರೆ ವಿವರಗಳನ್ನು ಸಂಗ್ರಹಿಸುತ್ತಿದ್ದೇವೆ" ಎಂದು ಕಾನ್ಪುರದ ದಕ್ಷಿಣ ಉಪ ಪೊಲೀಸ್ ಆಯುಕ್ತ ರವೀನಾ ತ್ಯಾಗಿ ಮಾಹಿತಿ ನೀಡಿದ್ದಾರೆ.
"ಬಂಧಿತರಿಂದ ರೆಮ್ಡಿಸಿವಿರ್ ಚುಚ್ಚುಮದ್ದಿನ 265 ಶೀಷೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ" ಎಂದು ಉತ್ತರ ಪ್ರದೇಶ ಪೊಲೀಸ್ ವಿಶೇಷ ಕಾರ್ಯಪಡೆಯ ಹಿರಿಯ ಅಧಿಕಾರಿಯೋರ್ವರು ಹೇಳಿದ್ದಾರೆ.
ಪ್ರಕರಣದ ಬಗ್ಗೆ ಬಾಬುಪುರ್ವಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.