ಬೆಂಗಳೂರು, ಏ 15 (DaijiworldNews/MS): ಪರೀಕ್ಷೆಗೆ ಇನ್ನಷ್ಟು ಕಾಲಾವಕಾಶ ಇರುವುದರಿಂದ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಅವಲೋಕಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂಬ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿಕೆ ಹಾಗೂ 10ನೇ ತರಗತಿ ಶಾಲಾ ಪರೀಕ್ಷೆ ಕುರಿತು ಇಂದು ಬೆಳಗ್ಗೆ ನಡೆಯಬೇಕಿದ್ದ ಮಹತ್ವದ ಸಭೆ ಮುಂದೂಡಿಕೆಯಾದ ಬೆನ್ನಲ್ಲೇ ವಿಪಕ್ಷ ಕಾಂಗ್ರೆಸ್ "ಮಕ್ಕಳ ಜೀವ ಹಾಗೂ ಭವಿಷ್ಯದ ಜೊತೆ ಆಟವಾಡುವುದನ್ನ ನಿಲ್ಲಿಸಿ" ಎಂದು ವಾಗ್ದಾಳಿ ನಡೆಸಿದೆ.
ಈ ಬಗ್ಗೆ ಅಧಿಕೃತ ಟ್ವಿಟರ್ ಖಾತೆಯೊಂದ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ " ಸಚಿವ ಸುರೇಶ್ ಕುಮಾರ್ ಅವರೇ ಮಕ್ಕಳ, ಜೀವ ಹಾಗೂ ಭವಿಷ್ಯದ ಜೊತೆ ಆಟವಾಡುವುದನ್ನ ನಿಲ್ಲಿಸಿ. ನಿಮ್ಮ ಅಜ್ಞಾನಕ್ಕೆ, ದೂರದೃಷ್ಟಿಯ ಕೊರತೆಗೆ ಯುವ ಪೀಳಿಗೆಯನ್ನು ಬಲಿ ಕೊಡಬೇಡಿ. ಸೋಂಕು ಉಲ್ಬಣಿಸಿರುವ ವೇಳೆ ಸ್ಪಷ್ಟ ನಿರ್ಧಾರ ಕೈಗೊಳ್ಳಿ ಸ್ವಾಮಿ. ಅಡ್ಡ ಗೋಡೆ ಮೇಲೆ ದೀಪ ಇಡುವುದನ್ನು ಬಿಟ್ಟು ಯುವಪೀಳಿಗೆಗೆ ದಾರಿದೀಪವಾಗುವ ಕೆಲಸ ಮಾಡಿ. ಇನ್ನೂ ಸಮಯವಿದೆ, ಇನ್ನೂ ಕಾಲವಿದೆ ಎನ್ನುವ ಬೇಜವಾಬ್ದಾರಿ ಹೇಳಿಕೆ ಬಿಟ್ಟು ವಿದ್ಯಾರ್ಥಿಗಳಿಗೆ ಸ್ಪಷ್ಟತೆ ಕೊಡಿ ಎಂದು ಒತ್ತಾಯಿಸಿದೆ.
ನಿಮ್ಮ ಸೋಂಕಿತ ಸರ್ಕಾರ ಕೊರೊನಾವನ್ನು ನಿಯಂತ್ರಣಕ್ಕೆ ತರುವ ಯಾವುದೇ ಲಕ್ಷಣವಿಲ್ಲ, ಮುಂದೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಇದೆಲ್ಲವನ್ನೂ ಗಮನಿಸಿದರೆ ಪರೀಕ್ಷೆ ಮುಂದೂಡುವುದು ಅನಿವಾರ್ಯವಾಗಲಿದೆ ಎಂದು ಹೇಳಿದೆ.
ಕರೋನಾ, ಲಾಕ್ಡೌನ್ , ಬಗೆಹರಿಯದ ಶಾಲಾ ಶುಲ್ಕ ವಿವಾದ, ಯಶಸ್ವಿಯಾಗದ ವಿದ್ಯಾಗಮ, ಹಿಂದುಳಿದ ಕಲಿಕಾ ಪ್ರಗತಿ, ಪೂರ್ಣಗೊಳ್ಳದ ಪಾಠಗಳು, ಶಿಕ್ಷಣದಿಂದ ಹೊರಗುಳಿದ ವಿದ್ಯಾರ್ಥಿಗಳು, ಆನ್ಲೈನ್ ತರಗತಿಗಳ ವೈಫಲ್ಯ ಇವೆಲ್ಲವುಗಳ ನಡುವೆ ವಿದ್ಯಾರ್ಥಿಗಳ ಭವಿಷ್ಯ ಮಂಕಾಗಿದೆ.ಸಚಿವ ಸುರೇಶ್ ಕುಮಾರ್ ಅವರೇ ಪರೀಕ್ಷೆಗಳ ಮೊದಲು ಈ ಎಲ್ಲಾ ವಿಚಾರಗಳಲ್ಲಿ ಲೋಪ ಸರಿಪಡಿಸಿ. ಎಂದು ಒತ್ತಾಯಿಸಿದೆ.
ಇನ್ನು 10ನೇ ತರಗತಿ ಶಾಲಾ ಪರೀಕ್ಷೆ ಕುರಿತು ಶುಕ್ರವಾರ ಬೆಳಗ್ಗೆ ನಡೆಯಬೇಕಿದ್ದ ಅಧಿಕೃತ ಮಹತ್ವದ ಸಭೆ ಮುಂದೂಡಿಕೆಯಾಗಿದೆ. ಇದಲ್ಲದೆ 1-9ನೇ ತರಗತಿ ಪರೀಕ್ಷೆ ಕುರಿತು ಇನ್ನೆರಡು ದಿನದ ಬಳಿಕ ಸಭೆ ನಡೆಯಲಿದೆ. ಕೊರೊನಾ ತಾಂತ್ರಿಕಾ ಸಲಹಾ ಸಮಿತಿ ಸಭೆ ಬಳಿಕ ಅಧಿಕೃತ ಆದೇಶ ಹೊರಡಿಸಲಿದೆ ಎಂದು ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಮಾಹಿತಿ ನೀಡಿದ್ದಾರೆ.