ಬೆಂಗಳೂರು, ಏ 15 (DaijiworldNews/MS): ರಾಜ್ಯದಲ್ಲಿ ಕೊರೊನಾ ೨ನೇ ಅಲೆಯಲ್ಲಿ ಹೆಚ್ಚುತಿರುವ ಬೆನ್ನಲ್ಲೇ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೊವೀಡ್ ತಾಂತ್ರಿಕ ಸಲಹಾ ತಜ್ಞರು ಇಂದು ವರದಿ ಸಲ್ಲಿಸಲಿದ್ದಾರೆ. ನಾಳೆ ಮುಖ್ಯಮಂತ್ರಿಗಳೊಂದಿಗೆ ವರದಿಯ ಬಗ್ಗೆ ಚರ್ಚಿಸಿ ಆ ಬಳಿಕ ಸೋಂಕು ನಿಯಂತ್ರಣಕ್ಕೆ ಬಿಗಿ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ನಿರ್ಧರಿಸುತ್ತೇವೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಇತರ ರಾಜ್ಯದಲ್ಲಿ ಸೋಂಕು ನಿಯಂತ್ರಣಕ್ಕೆ ಯಾವ್ಯಾವ ಕ್ರಮ ತೆಗೆದುಕೊಳ್ಳುತ್ತಿದ್ದಾರೆಂದು ನೋಡುತ್ತಿದ್ದೇವೆ. ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತಜ್ಞರು ಇಂದು ವರದಿ ಸಲ್ಲಿಸಲಿದ್ದಾರೆ. ಹೀಗಾಗಿ ಯಾವ ರೀತಿ ಕ್ರಮ ವಹಿಸಬೇಕು ಎನ್ನುವ ಕಲ್ಪನೆಯಿದೆ ಎಂದಿದ್ದಾರೆ.
ಮಹಾರಾಷ್ಟ್ರದಷ್ಟು ಸೋಂಕಿನ ಪ್ರಮಾಣ ನಮ್ಮಲ್ಲಿ ಇಲ್ಲ. ಹೀಗಾಗಿ, ಅದನ್ನು ಇಲ್ಲಿ ಮಾಡುವ ಅಗತ್ಯತೆ ಇಲ್ಲ. ಸಿಎಂ, ಗೃಹ ಸಚಿವರು ಸೇರಿದಂತೆ ಎಲ್ಲರೂ ಅವರ ವಲಯಗಳಲ್ಲಿ ಗಮನಿಸುತ್ತಿದ್ದಾರೆ. ಆದ್ರೆ ಸೋಂಕಿನ ನಿಯಂತ್ರಣಕ್ಕೆ ಏನೇ ಆದರೂ ಜನರ ಸಹಕಾರ ಅಗತ್ಯ. . ಜನರು ಯಾವುದೇ ಸಭೆ ಸಮಾರಂಭಗಳನ್ನು ಎರಡು ತಿಂಗಳು ಮುಂದಕ್ಕೆ ಹಾಕಿ. ಕೆಲವು ಕಾರ್ಯಕ್ರಮಗಳನ್ನು ಮುಂದಕ್ಕೆ ಹಾಕುವುದರಿಂದ ಜೀವ ಏನೂ ಹೋಗಲ್ಲ ಎಂದೂ ಮನವಿ ಮಾಡಿದ್ದಾರೆ.