ಬೆಳಗಾವಿ, ಏ.15 (DaijiworldNews/MB) : ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಾಸಕ ಹಾಗೂ ಗಾಂಧಿವಾದಿಯಾದ ಸದಾಶಿವರಾವ ಬಾಪುಸಾಹೇಬ ಭೋಸಲೆ (101) ವಯೋಸಹಜ ಅನಾರೋಗ್ಯದಿಂದ ತಾಲ್ಲೂಕಿನ ಕಡೋಲಿ ಗ್ರಾಮದ ಸ್ವಗೃಹದಲ್ಲಿ ಗುರುವಾರ ಮುಂಜಾನೆ ನಿಧನರಾಗಿದ್ದಾರೆ.
ಗಾಂಧೀಜಿ ಹಾಗೂ ವಿನೋಬಾ ಭಾವೆ ಅವರ ವಿಚಾರಧಾರೆತಯಿಂದ ಪ್ರೇರೇಪಿತರಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದ ಸದಾಶಿವರಾವ ಭೋಸಲೆ ಅವರು, 1946 ರಲ್ಲಿ ಬ್ರಿಟಿಷ್ ಸರ್ಕಾರ ಚುನಾವಣೆ ನಡೆಸಿದ್ದ ಸಂದರ್ಭ ಹಾಗೂ 1952 ರಲ್ಲಿ ಶಾಸಕರಾಗಿದ್ದರು.
ಬಳಿಕ ಸರ್ಕಾರವು ಬಡವರ ಪರವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅಸಮಾಧಾನಗೊಂಡು 1954ರಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಭೂ ದಾನ ಚಳವಳಿಯಲ್ಲಿ ಭಾಗಿಯಾದರು. ನೂರು ಎಕರೆವರೆಗೆ ಜಮೀನನ್ನು ಗ್ರಾಮದ ಜನರಿಗೆ ದಾನವಾಗಿ ನೀಡಿದರು.
ಕಟ್ಟ ಗಾಂಧಿವಾದಿಯಾಗಿದ್ದ ಅವರು, ತಮ್ಮ ಜೀವನದಲ್ಲೇ ಗಾಂಧಿ ತತ್ವಗಳನ್ನು ಅಳವಡಿಸಿಕೊಂಡಿದ್ದರು. ತಮಗೆ ಹಾಗೂ ಪತ್ನಿಗೆ ಬೇಕಾದ ಖಾದಿ ಬಟ್ಟೆಗಳನ್ನು ಚರಕದಲ್ಲಿ ತಾವಾಗಿಯೇ ಸಿದ್ಧಪಡಿಸಿಕೊಳ್ಳುತ್ತಿದ್ದರು. ಸರಳ ಜೀವನ ನಡೆಸುತ್ತಿದ್ದರು. ಕಡೋಲಿ ಸಮೀಪದ ದೇವಗಿರಿಯಲ್ಲಿ ಕಟ್ಟಡವೊಂಡನ್ನು ಕಟ್ಟಿಸಿ ಅದಕ್ಕೆ ಗಾಂಧಿ ಘರ್ ಎಂದು ಹೆಸರಿಟ್ಟಿದ್ದ ಅವರು, ಅದರಲ್ಲಿ ನೂಲು ತೆಗೆಯುವುದು, ಮಕ್ಕಳಿಗೆ ಅಕ್ಷರಾಭ್ಯಾಸ, ಮಹಿಳೆಯರಿಗೆ ಸ್ವ ಉದ್ಯೋಗ ತರಬೇತಿ, ಕೃಷಿ, ಸ್ವಚ್ಛತೆ ಜಾಗೃತಿ ಮತ್ತು ಚಿಂತನ–ಮಂಥನ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು.