ಬೆಂಗಳೂರು, ಏ 15 (DaijiworldNews/MS): ರಾಜ್ಯದಲ್ಲಿ ಕೊರೊನಾ 2ನೇ ಅಲೆ ತೀವ್ರಗೊಳ್ಳುತ್ತಿದ್ದು, ಸೋಂಕಿನ ಅಟ್ಟಹಾಸ ಮುಂದುವರೆದಿದ್ದು ಬುಧವಾರ ಒಂದೇ ದಿನ 11,265 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 10,94,912ಕ್ಕೆ ಏರಿಕೆಯಾಗಿದೆ. ಈ ಬೆಳವಣಿಗೆ ನಿಜಕ್ಕೂ ಕಳವಳಕಾರಿಯಾಗಿದ್ದು, ಸೋಂಕು ಅಂಕೆಗೆ ಸಿಗದೆ ಹೋದರೆ ಮತ್ತೆ ರಾಜ್ಯದ ಆಸ್ಪತ್ರೆಗಳಲ್ಲಿ ಹಾಸಿಗೆ , ವೆಂಟಿಲೇಟರ್ ಗಳ ಸಮಸ್ಯೆ ಉದ್ಬವವಾಗಲಿದೆ.
ಸೋಂಕಿನಿಂದ ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ 38 ಜನ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 13,046ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವರದಿ ತಿಳಿಸಿದೆ.
ಇನ್ನು ಕೊರೊನಾ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗುತ್ತಿದ್ದರೂ ಲಸಿಕೆ ಪಡೆಯುವಲ್ಲಿ ಜನರ ನಿರುತ್ಸಾಹ ಕಂಡುಬರುತ್ತಿದೆ. ಕೊರೊನಾ ಸಾಂಕ್ರಮಿಕ ಅಲೆ ಜೋರಾಗಿರುವ ಕಾರಣ ಲಸಿಕೆ ಹಾಕಿಸಿಕೊಳ್ಳಿ, ಮುಂಜಾಗ್ರತೆ ಪಾಲಿಸಿ ಎಂದು ತಜ್ಞವೈದ್ಯರು ಸಲಹೆ ನೀಡಿದ್ದಾರೆ. ನಾಲ್ಕು ದಿನಗಳ ಲಸಿಕೆ ಉತ್ಸವದಲ್ಲಿ ರಾಜ್ಯದಲ್ಲಿ ದಿನಕ್ಕೆ 1.1 ಲಕ್ಷ ಮಂದಿಯಂತೆ 4.4 ಲಕ್ಷ ಮಂದಿ ಲಸಿಕೆ ಪಡೆದಿದ್ದು, ಲಸಿಕೆ ಪಡೆಯುವಲ್ಲಿ ಜನರ ನಿರುತ್ಸಾಹ ಎದ್ದು ಕಾಣುತ್ತಿದೆ.
ರಾಜ್ಯದಲ್ಲಿ ಇಂದು 4,364 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 9,96,367ಕ್ಕೆ ಏರಿಕೆಯಾಗಿದೆ. ಇನ್ನು 85,480 ಸಕ್ರೀಯ ಪ್ರಕರಣಗಳಿದ್ದು, ಈ ಪೈಕಿ 506 ಮಂದಿ ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.