ಹಾಸನ, ಏ.13 (DaijiworldNews/MB) : ಹಾಸನ ಜಿಲ್ಲೆಯಲ್ಲಿ ಏರ್ಪಡಿಸಿದ್ದ ರೇವ್ ಪಾರ್ಟಿ ಮೇಲೆ ಪೊಲೀಸ್ ದಾಳಿ ನಡೆಸಿದ 134 ಯುವಕ-ಯುವತಿಯರನ್ನು ವಶಕ್ಕೆ ಪಡೆದ ಘಟನೆ ಭಾನುವಾರ ನಡೆದಿದ್ದು, ಈ ಯುವಕ-ಯುವತಿಯರ ಗುಂಪಿನಲ್ಲಿ ಕರಾವಳಿ ಕರ್ನಾಟಕದ ಒಂದು ಗುಂಪು ಕೂಡಾ ಇತ್ತು ಎಂದು ಬಹಿರಂಗಗೊಂಡಿದೆ. ಕೊರೊನಾ ನೈಟ್ ಕರ್ಫ್ಯೂ ಹೇರಿಕೆಯಾಗಿರುವ ಮಂಗಳೂರು, ಉಡುಪಿ, ಮಣಿಪಾಲದ ಯುವಕ, ಯುವತಿಯರು ಕೂಡಾ ಈ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ ಎಂದು ವರಿದಿಯಾಗಿದೆ.
ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಹೊಂಕರಹಳ್ಳಿ ರೆಸಾರ್ಟ್ನಲ್ಲಿ ಶನಿವಾರ ರಾತ್ರಿ ಪಾರ್ಟಿ ನಡೆದಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡರ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿದಾಗ ಪಾರ್ಟಿ ನಡೆಯುತ್ತಿತ್ತು. ಅಲ್ಲಿ 134 ಯುವಕ-ಯುವತಿಯರು ಇದ್ದು ಮದ್ಯದ ಬಾಟಲಿಗಳು ಮತ್ತು ಮಾದಕ ವಸ್ತುಗಳು ಕಂಡುಬಂದಿದ್ದವು.
ನಗರಗಳಲ್ಲಿ, ಸಾಮಾನ್ಯವಾಗಿ ಯುವಕರು ವಾರಾಂತ್ಯದಲ್ಲಿ ಪಬ್ಗಳು ಅಥವಾ ರೆಸಾರ್ಟ್ಗಳಿಗೆ ಭೇಟಿ ನೀಡುತ್ತಾರೆ. ಆದರೆ ಕೊರೊನಾ ಕರ್ಫ್ಯೂ ಜಾರಿಯಲ್ಲಿದ್ದ ಕಾರಣ ಈ ಯುವಕರು ಹಾಸನದಲ್ಲಿ ಪಾರ್ಟಿಯನ್ನು ಆಯೋಜಿಸಿದ್ದರು.
ಪೊಲೀಸ್ ದಾಳಿಯ ಸಮಯದಲ್ಲಿ ಪಾರ್ಟಿಯಲ್ಲಿದ್ದ 134 ಜನರಲ್ಲಿ ಹೆಚ್ಚಿನವರು ಅವಿವಾಹಿತರಾಗಿದ್ದರು. ಅವರ ವಿಚಾರಣೆಯ ಸಮಯದಲ್ಲಿ, ಅವರು ಮಂಗಳೂರು, ಉಡುಪಿ, ಬೆಂಗಳೂರು ಮುಂತಾದ ವಿವಿಧ ಸ್ಥಳಗಳಿಂದ ಬಂದಿದ್ದಾರೆ ಎಂದು ತಿಳಿದು ಬಂದಿದೆ.
ಈ ಪೈಕಿ ಅನೇಕ ಮಂದಿ ತೀರಾ ನಶೆಯಲ್ಲಿದ್ದು ಪೊಲೀಸರು ರೆಸಾರ್ಟ್ಗೆ ಪ್ರವೇಶಿಸಿದ ಬಹಳ ಸಮಯದ ನಂತರವೂ ಈ ದಾಳಿಯ ಬಗ್ಗೆ ಅವರಿಗೆ ಅರಿವಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಲವರು ಅರೆ ನಗ್ನರಾಗಿರುವುದು ಕಂಡು ಬಂದಿದೆ. ಇನ್ನು ಈ ಪೈಕಿ ಹಲವು ಮಂದಿ ನಾವು ವಿವಾಹಿತರಾಗಿರುವ ಹಿನ್ನೆಲೆ ನಮ್ಮನ್ನು ಬಿಡಬೇಕು ಎಂದು ಪೊಲೀಸರಲ್ಲಿ ಮನವಿ ಮಾಡಿದ್ದು ರಜಾದಿನದ ಕಾರಣ ರೆಸಾರ್ಟ್ಗೆ ಬಂದೆವು ಎಂದು ಕೂಡಾ ಹೇಳಿದ್ದಾರೆ. ಕೆಲವರು ಉದ್ಯೋಗ ಕಳೆದುಕೊಳ್ಳುವ ಭೀತಿಯಿಂದ ದಯವಿಟ್ಟು ನಮ್ಮ ವಿರುದ್ದ ಪ್ರಕರಣ ದಾಖಲಿಸಬಾರದು ಎಂದು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಪಾರ್ಟಿಗಾಗಿ ಬುಕಿಂಗ್ ಆನ್ಲೈನ್ನಲ್ಲಿತ್ತು ಎಂದು ಹೇಳಲಾಗಿದೆ. ಬುಕ್ ಮಾಡುವವರು ವಾಟ್ಸಾಪ್ ಸಂದೇಶಗಳ ಮೂಲಕ ಸ್ಥಳದ ಮಾಹಿತಿ ಪಡೆದಿದ್ದರು. ಹಾಗೆಯೇ ಇತರರು ಅಲ್ಲಿಗೆ ಬರದಂತೆ ನೋಡಿಕೊಳ್ಳಲು ಎಲ್ಲರಿಗೂ ಟ್ಯಾಗ್ಗಳನ್ನು ನೀಡಲಾಗಿತ್ತು. ಅರಣ್ಯ ಪ್ರದೇಶ ಅಥವಾ ಗ್ರಾಮೀಣ ಎಸ್ಟೇಟ್ಗಳಲ್ಲಿ ಅವರು ಈ ರೀತಿ ಪಾರ್ಟಿ ಆಯೋಜಿಸುತ್ತಿದ್ದುದ್ದರಿಂದ ಪೊಲೀಸರ ಗಮನಕ್ಕೆ ಬರುತ್ತಿರಲಿಲ್ಲ ಎಂದು ಹೇಳಲಾಗಿದೆ.
ಪತ್ತೆಯಾದ 134 ಜನರಲ್ಲಿ 131 ಜನರಿಗೆ ಜಾಮೀನು ನೀಡಲಾಗಿದೆ. ನ್ಯಾಯಾಲಯದಲ್ಲಿ ಹಾಜರುಪಡಿಸಿದ ನಂತರ ಹೆಚ್ಚಿನ ವಿಚಾರಣೆ ನಡೆಸಲು ಎಸ್ಟೇಟ್ ಮಾಲೀಕ ಗಗನ್, ಬೆಂಗಳೂರಿನ ಮುರುಗೇಶಪಾಳ್ಯದ ಸೋನಿ ಮತ್ತು ಬನ್ನೇರುಘಟ್ಟದ ಪಂಕಜ್ ಅವರನ್ನು ವಶದಲ್ಲಿರಿಸಲಾಗಿದೆ ಎಂದು ಆಲೂರು ಪೊಲೀಸ್ ಇನ್ಸ್ಪೆಕ್ಟರ್ ವೆಂಕಟೇಶ್ ತಿಳಿಸಿದ್ದಾರೆ.