ಬೆಂಗಳೂರು, ಏ.13 (DaijiworldNews/MB) : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಸಿಡಿ ಲೇಡಿಯು ಮತ್ತೆ ವಿಡಿಯೋ ಸಂದೇಶ ಬಿಡುಗಡೆ ಮಾಡಿದ್ದು, ''ನರೇಶ್ ಮತ್ತು ಶ್ರವಣ್ ನನ್ನನ್ನು ಹನಿ ಟ್ರ್ಯಾಪ್ಗೆ ಬಳಿಸಿಕೊಂಡು ಈ ರೀತಿಯ ಕೃತ್ಯ ಎಸಗಿದ್ದಾರೆ ಎಂದು ನಾನು ವಿಚಾರಣೆ ವೇಳೆ ಹೇಳಿಲ್ಲ. ಹನಿಟ್ಯ್ರಾಪ್ ವರದಿ ಸಂಪೂರ್ಣ ಸುಳ್ಳು'' ಎಂದು ಹೇಳಿದ್ದಾರೆ.
''ರಮೇಶ್ ಜಾರಕಿಹೊಳಿ ವಿರುದ್ಧ ನನ್ನ ಹೇಳಿಕೆ ಪೂರ್ಣ ಸತ್ಯವಲ್ಲ, ನಾನು ಹನಿಟ್ರ್ಯಾಪ್ ಆಗಿದ್ದೆ. ನರೇಶ್ ಹಾಗೂ ಶ್ರವಣ್ ನನ್ನನ್ನು ಆ ರೀತಿ ಬಳಸಿಕೊಂಡಿದ್ದು, ಅವರು ಹೇಳಿದಂತೆ ನಾನು ನಡೆದುಕೊಂಡೆ. ಈ ಹಿಂದೆ ಒತ್ತಡದಲ್ಲಿದ್ದರಿಂದ ಆ ರೀತಿ ಹೇಳಿಕೆ ಕೊಟ್ಟಿದ್ದೆ'' ಎಂದು ಎಸ್ಐಟಿ ತನಿಖಾಧಿಕಾರಿ ಮುಂದೆ ಯುವತಿ ಹೇಳಿಕೆ ನೀಡಿದ್ದಾಳೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.
ಈ ಬೆನ್ನಲ್ಲೇ ಮತ್ತೆ ವಿಡಿಯೋ ಮೂಲಕ ಹೇಳಿಕೆ ನೀಡಿರುವ ಸಿಡಿ ಯುವತಿ, ''ನಾನು ಎಸ್ಐಟಿ ತನಿಖಾಧಿಕಾರಿಗಳ ಮುಂದೆ ಆ ರೀತಿಯ ಯಾವುದೇ ಹೇಳಿಕೆಯನ್ನು ನೀಡಿಲ್ಲ. ನಾನು ಈ ಹಿಂದೆ ನೀಡಿರುವ ಹೇಳಿಕೆಯನ್ನೇ ಎಸ್ಐಟಿ ಅಧಿಕಾರಿಗಳ ಮುಂದೆ ಹೇಳಿದ್ದೇನೆ. ನಾನು ಒತ್ತಡದಲ್ಲಿದ್ದ ಸಂದರ್ಭ ನ್ಯಾಯಾದೀಶರ ಮುಂದೆ ಹೇಳಿಕೆ ನೀಡಿದ್ದೆ. ಆ ಕಾರಣದಿಂದಾಗಿ ನಾನು ಎಸ್ಐಟಿ ಅಧಿಕಾರಿಗಳಲ್ಲಿ ಮರು ಹೇಳಿಕೆ ಪಡೆಯುವಂತೆ ಹೇಳಿದ್ದೆ ಅಷ್ಟೇ'' ಎಂದು ತಿಳಿಸಿದ್ದಾರೆ.
ಹಾಗೆಯೇ ''ರಮೇಶ್ ಜಾರಕಿಹೊಳಿ ಅವರು ತನಿಖೆಗೆ ಸಹಕಾರ ನೀಡದೆ, ಕೊರೊನಾ ಸೋಂಕಿನ ಸುಳ್ಳು ನೆಪ ಹೇಳಿ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ'' ಎಂದು ಕೂಡಾ ಯುವತಿ ದೂರಿದ್ದಾರೆ.
''ನಾನು ನನ್ನ ಪೋಷಕರೊಂದಿಗೆ ಫೋನ್ ಕರೆಯಲ್ಲಿ ಮಾತನಾಡುತ್ತಿದ್ದೇನೆ. ಆದರೆ ಹೇಳಿಕೆ ನೀಡುವ ಮೊದಲು ನನ್ನ ಮನಸ್ಸನ್ನು ಬದಲಾಯಿಸಿ ಸುಳ್ಳು ಹೇಳಿಕೆ ನೀಡಿಲ್ಲ'' ಎಂದೂ ಹೇಳಿದ್ದಾರೆ.