ಶ್ರೀನಗರ,ಏ 10 (DaijiworldNews/MS): ದಕ್ಷಿಣ ಕಾಶ್ಮೀರದಲ್ಲಿ ಶುಕ್ರವಾರ ನಡೆದ ಎರಡು ಪ್ರತ್ಯೇಕ ಎನ್ ' ಕೌಂಟರ್ ನಲ್ಲಿ ಏಳು ಉಗ್ರರ ಹತ್ಯೆ ಮಾಡಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ನಡೆದ ಎರಡು ಎನ್ಕೌಂಟರ್ಗಳಲ್ಲಿ ಭಯೋತ್ಪಾದಕ ಸಂಘಟನೆ ಅನ್ಸಾರ್ ಘಜ್ವಾತುಲ್ ಹಿಂದ್ ಮುಖ್ಯಸ್ಥ ಇಮ್ತಿಯಾಜ್ ಅಹ್ಮದ್ ಶಾ ಸೇರಿದಂತೆ ಏಳು ಉಗ್ರರನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಆದರೆ ವೇಳೆ ಮೂವರು ನಾಗರಿಕರು ಮತ್ತು ನಾಲ್ವರು ಭದ್ರತಾ ಪಡೆ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಕಾಶ್ಮೀರ್ ಪೊಲೀಸ್ ಮಹಾನಿರ್ದೇಶಕರು ಮಾಹಿತಿ ನೀಡಿದ್ದಾರೆ.ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ಟ್ರಾಲ್ ಪ್ರದೇಶದಲ್ಲಿ ಇಬ್ಬರು ಉಗ್ರರು ಹತರಾಗಿದ್ದರೆ, ಶೋಪಿಯಾನ್ ಪ್ರದೇಶದಲ್ಲಿ ಇತರ ಐವರು ಉಗ್ರರನ್ನು ಸದೆಬಡಿಯಲಾಗಿದೆ. ಹತರಾದವರಲ್ಲಿ ಓರ್ವ ಅನ್ಸರ್ ಘಜ್ವತ್ ಉಲ್ ಹಿಂದ್ (ಎಜಿಹೆಚ್) ಗೆ ಸೇರಿದ ಭಯೋತ್ಪಾದಕ ಎಂದು ತಿಳಿದು ಬಂದಿದೆ.
ಈ ಉಗ್ರರು ಅಮರನಾಥ ಯಾತ್ರಿಕರ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ಹೇಳಾಗುತ್ತಿದೆ. ಗಾಯಗೊಂಡ ನಾಗರಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ನೀಡಲಾಗುತ್ತಿದೆ.