ನವದೆಹಲಿ, ಮಾ.27 (DaijiworldNews/MB) : 'ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹ ಮಾಡಿದ್ದೆ' ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯೂ ಈಗ ಭಾರೀ ಟೀಕೆಗೆ ಒಳಗಾಗಿದೆ. ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿ ಅವರನ್ನು ಗೇಲಿ ಮಾಡುತ್ತಿದ್ದರೆ, ಟ್ವಿಟರ್ನಲ್ಲಿ #lielikemodi ಎಂಬ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ.
ಬಾಂಗ್ಲಾದೇಶ ಸ್ವಾತಂತ್ರ್ಯೋತ್ಸವದ 50ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, 'ನನಗೆ ಆಗ 20-22 ವರ್ಷ ಇರಬಹುದು ನಾನು ಮತ್ತು ನನ್ನ ಸಹಪಾಠಿಗಳು ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹ ಮಾಡಿದ್ದೆವು' ಎಂದು ಹೇಳಿದ್ದರು.
ಮೋದಿ ಈ ಹೇಳಿಕೆಯು ಈಗ ನಗೆಪಾಟಲಿಗೀಡಾಗುತ್ತಿದೆ. ಕಾಂಗ್ರೆಸ್ ವಕ್ತಾರ ಶ್ರೀವತ್ಸ ಪ್ರಧಾನಿ ಮೋದಿ ಕಾಲೆಳೆದಿದ್ದು, "ಬರ್ಲಿನ್ ಗೋಡೆ ಬಿದ್ದ ವೇಳೆ ಅದರ ಮೇಲೆ ಪ್ರಧಾನಿ ಮೋದಿ ಕೂತಿದ್ದರು. ಕ್ಯಾಲಿಕಟ್ನಲ್ಲಿ ವಾಸ್ಕೋಡಗಾಮನನ್ನು ಸ್ವಾಗತಿಸಿದ್ದು ನರೇಂದ್ರ ಮೋದಿ" ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ನಾಯಕ ಶಶಿ ತರೂರ್ ಮೋದಿ ಹೇಳಿಕೆಯನ್ನು ಟೀಕಿಸಿದ್ದು, ''ನಮ್ಮ ಪ್ರಧಾನಿ ಭಾರತದ 'ನಕಲಿ ಸುದ್ದಿಗಳ' ರುಚಿಯನ್ನು ಬಾಂಗ್ಲಾದೇಶಕ್ಕೆ ತೋರಿಸುತ್ತಿದ್ದಾರೆ. ಬಾಂಗ್ಲಾದೇಶವನ್ನು ಸ್ವತಂತ್ರಗೊಳಿಸಿದವರು ಯಾರು ಎಂದು ಎಲ್ಲರಿಗೂ ತಿಳಿದಿದೆ'' ಎಂದು ಹೇಳಿದ್ದಾರೆ.
ಇನ್ನು ಕಾಂಗ್ರೆಸ್ನ ಈ ಎಲ್ಲಾ ಟೀಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ''ಪ್ರಧಾನಿ ಮೋದಿ ಅವರು ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಜನಸಂಘವು ಆಯೋಜಿಸಿದ್ದ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದರು. 'ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಆಯೋಜಿಸಲಾಗಿದ್ದ ಸತ್ಯಾಗ್ರಹದ ವೇಳೆ ಅವರು ತಿಹಾರ್ ಜೈಲಿಗೆ ಹೋಗಿದ್ದರು. ಈ ಬಗ್ಗೆ 1978ರಲ್ಲಿ ಬರೆದ ಪುಸ್ತಕವೊಂದರಲ್ಲಿ ಉಲ್ಲೇಖವಿದೆ'' ಎಂದು ಹೇಳಿದ್ದು ಟ್ವೀಟ್ನಲ್ಲಿ ಪುಸ್ತಕದ ಸ್ಕ್ರೀನ್ಶಾಟ್ನ್ನು ಹಂಚಿಕೊಂಡಿದ್ದಾರೆ.