ಬೆಂಗಳೂರು, ಮಾ 26 (DaijiworldNews/MS): ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂತ್ರಸ್ತ ಯುವತಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ವಿರುದ್ಧ ಶುಕ್ರವಾರ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಬೆಳಸಿದ್ದರು ಎಂದು ಆರೋಪಿಸಿದ್ದಾರೆ. ವಕೀಲ ಜಗದೀಶ್, ಯುವತಿ ಪರವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಇನ್ನು ಕಮಲ್ ಪಂತ್ ದೂರು ಪರಿಶೀಲನೆ ಮಾಡಿ, ಪ್ರಕರಣವನ್ನು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವರ್ಗಾಯಿಸಿದ್ದಾರೆ. ಮುಖ್ಯವಾಗಿ ಯುವತಿ ಜಾರಕಿಹೊಳಿಯವರ ವಿರುದ್ದ ಪೊಲೀಸರಿಗೆ ದೂರು ನೀಡದಂತೆ ತಡೆಯಲು ಯತ್ನಿಸಿದರು ಮತ್ತು ನನ್ನ ಹತ್ಯೆಗೆ ರಮೇಶ್ ಜಾರಕಿಹೊಳಿ ಅವರು ಮುಂದಾಗಿದ್ದರೂ ಎಂದು ಯುವತಿ ಗಂಭೀರ ಆರೋಪ ಮಾಡಿದ್ದಾರೆ.
ದೂರಿನಲ್ಲಿ ಏನಿದೆ?
ಯುವತಿ ನೀಡಿದ ಎರಡು ಪುಟದ ದೂರಿನಲ್ಲಿ" ಸರ್ಕಾರಿ ಕೆಲಸ ಕೊಡಿಸುವುದಾಗಿ ಲೈಂಗಿಕ ಸಂಪರ್ಕ ನಡೆಸಿದ್ಧಾರೆ. ರಮೇಶ್ ವಿಡಿಯೋ ಕರೆ ಮಾಡಿ ಅಶ್ಲೀಲ ಮಾತುಗಳನ್ನಾಡಿದ್ದಾರೆ. ನಗ್ನವಾಗಿ ಮಾತನಾಡಲು ಪುಸಲಾಯಿಸಿದ್ದಾರೆ. ಪ್ರಭಾವ ಬೀರಿ ಸರ್ಕಾರಿ ಕೆಲಸ ಕೊಡಿಸುವ ಆಮಿಷವೊಡ್ಡಿದ್ದು ಕೆಲಸದ ಬದಲಾಗಿ ಎಲ್ಲಾ ರೀತಿ ಸಹಕಾರಕ್ಕೆ ಬೇಡಿಕೆ ಇಟ್ಟಿದ್ದಾರೆ. ನಾನು ದೂರು ನೀಡದಂತೆ ತಡೆಯಲು ಮತ್ತು ಅವರ ಕೈಗೆ ಸಿಕ್ಕರೆ ಕೊಂದುಬಿಡಲು ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ನಾನು ಎದುರು ಮಾತನಾಡಲು ಹೆದರಿ ಅವರು ಕೇಳಿದಂತೆ ಮಾಡಿರುತ್ತೇನೆ. ನಂತರ ಸರ್ಕಾರಿ ನೌಕರಿ ಬಗ್ಗೆ ಕೇಳಿದಾಗ ಸ್ವಲ್ಪ ಹಣ ಬೇಕಾದರೆ ಕೇಳು ಕೆಲಸದ ಕತೆ ಆಮೇಲೆ ನೋಡೋಣ ಎಂದು ಅವಾಜ್ ಮಾಡುತ್ತಿದ್ದರು".
"ದಯಮಾಡಿ ತಾವು ನನಗೆ ಮತ್ತು ನನ್ನ ಕುಟುಂಬದ ಸದಸ್ಯರಿಗೆ ಭದ್ರತೆ ನೀಡಿ. ನನ್ನನ್ನು ಲೈಂಗಿಕವಾಗಿ ಬಳಸಿಕೊಂಡು ಕೆಲಸ ಕೊಡಿಸದೇ ಮೋಸ ಮಾಡಿ, ಅಶ್ಲೀಲವಾಗಿ ಬಳಸಿಕೊಂಡು, ನಿಂದಿಸಿ ಕೊಲೆ ಮಾಡಿಸಲು ಪ್ರಯತ್ನ ಮಾಡುತ್ತಿರುವ ರಮೇಶ್ ಜಾರಕಿಹೊಳಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುತ್ತೇನೆ" ಎಂಬಿತ್ಯಾದಿ ಉಲ್ಲೇಖಿಸಿದ್ದಾರೆ.