ಕೋಲ್ಕತಾ, ಮಾ 26 (DaijiworldNews/MS): ಭಾರತದಲ್ಲಿರುವ 30% ಮುಸ್ಲಿಮರು ಒಗ್ಗೂಡಿದರೂ ಸಾಕೂ ನಾಲ್ಕು ಪಾಕಿಸ್ತಾನಗಳನ್ನು ರಚಿಸಬಹುದು ಎಂದು ಟಿಎಂಸಿ ನಾಯಕ ಶೇಖ್ ಆಲಂ ಹೇಳಿದ್ದು, ಈ ಹೇಳಿಕೆ ಭಾರೀ ವಿವಾದಕ್ಕೀಡಾಗಿದೆ.
ಅವರ ವಿಡಿಯೋ ದೃಶ್ಯಾವಳಿಯನ್ನು ಪಶ್ಚಿಮಬಂಗಾಳದ ಬಿಜೆಪಿ ಮುಖಂಡ , ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಟ್ವೀಟ್ ಮಾಡಿದ್ದು ಇದೀಗ ಟಿಎಂಸಿ ನಾಯಕ ಶೇಖ್ ಆಲಂ ಹೇಳಿಕೆಯನ್ನು ಭಾರತೀಯ ಜನತಾ ಪಕ್ಷ ಖಂಡಿಸಿದೆ.
30 ಸೆಕೆಂಡುಗಳ ವೀಡಿಯೊದಲ್ಲಿ, ಬಿಲಭಮ್ ಅಸೆಂಬ್ಲಿ ಕ್ಷೇತ್ರದ ವ್ಯಾಪ್ತಿಗೆ ಬರುವ ಬಾಸಾ ಪ್ಯಾರಾದಲ್ಲಿ ಆಲಂ ಮಾತನಾಡುತ್ತಿದ್ದಾರೆ."ನಾವು ಅಲ್ಪಸಂಖ್ಯಾತರು ಶೇ.30ರಷ್ಟಿದ್ದೇವೆ, ಉಳಿದವರು ಶೇ.70ರಷ್ಟಿದ್ದಾರೆ. ಆ ನಿಟ್ಟಿನಲ್ಲಿ ಅವರು(ಬಿಜೆಪಿ) ಬಂಗಾಳದಲ್ಲಿ ಶೇ.70ರಷ್ಟಿರುವ ಜನಸಂಖ್ಯೆ ಆಧಾರದ ಮೇಲೆ ಗದ್ದುಗೆ ಏರುವ ಕನಸು ಕಾಣುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು, ಒಂದು ವೇಳೆ ಶೇ.30ರಷ್ಟಿರುವ ಮುಸ್ಲಿಮರು ಒಗ್ಗೂಡಿದರೆ ನಾಲ್ಕು ಪಾಕಿಸ್ತಾನ ರಚಿಸಬಹುದು, ಆಗ ಭಾರತದಲ್ಲಿರುವ ಶೇ.70ರಷ್ಟು ಜನ ಎಲ್ಲಿಗೆ ಹೋಗುತ್ತಾರೆ" ಎಂದು ಆಲಂ ಪ್ರಶ್ನಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಈ ರೀತಿಯಾ ಬಂಗಾಳ ಸೃಷ್ಟಿಯಾಗುವುದು ನಮಗೆ ಬೇಕಿಲ್ಲ ಎಂದು ಮಾಳವೀಯ ಟ್ವೀಟ್ ನಲ್ಲಿ ಹೇಳಿದ್ದಾರೆ. ಪಶ್ಚಿಮಬಂಗಾಳದಲ್ಲಿ ಹಿಂದೂಗಳನ್ನು ಮಮತಾ ಅವರು 2ನೇ ದರ್ಜೆಯ ನಾಗರಿಕರಂತೆ ನಡೆಸಿಕೊಂಡಿದ್ದಾರೆ. ಅವರ ಆಪ್ತ ಶೇಖ್ ರಿಂದ ಇಂಥ ಹೇಳಿಕೆಗಳು ಬರುತ್ತವೆ ಎಂದು ಮಾಳವೀಯ ತಿರುಗೇಟು ನೀಡಿದ್ದಾರೆ. ಇನ್ನು ಈ ಹೇಳಿಕೆಯ ವಿವಾದ ಜೋರಾಗುತ್ತಲೇ ಸ್ಪಷ್ಟನೆ ನೀಡಿರುವ ಶೇಖ್ ಅಲಂ, ಮುಸ್ಲಿಮರ ಮೇಲೆ ದಬ್ಬಾಳಿಕೆ ಹೆಚ್ಚಾದರೆ ಎಲ್ಲರೂ ಒಗ್ಗೂಡುತ್ತಾರೆ ಎಂದಷ್ಟೇ ನಾನು ಹೇಳಿದ್ದೆ ಎಂದಿದ್ದಾರೆ.