ಬೆಂಗಳೂರು, ಮಾ.21 (DaijiworldNews/PY): ಎಲ್ಲೆಲ್ಲೋ ಹೋಗಿ ಬಟ್ಟೆಬಿಚ್ಚಿ ಮರ್ಯಾದೆ ಕಳೆಯುತ್ತಿರು ಬಿಜೆಪಿ ನಾಯಕರಿಗೆ ದಾನ ಮಾಡೋಣ ಎಂದು 90 ಜೊತೆ ಬಟ್ಟೆ ಖರೀದಿ ಮಾಡಿದ್ದೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ನೀಡಿರುವ ಬಿಜೆಪಿ, "ಗಾಜಿನ ಮನೆಯಲ್ಲಿ ಕೂತು ಕಚ್ಚೆ ಕಟ್ಟಬೇಡಿ" ಎಂದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, "ಮಜಾವಾದಿಗಳ ಸಡಿಲ ಕಚ್ಚೆ ಬಗ್ಗೆ ಪುರಾಣವೇ ಇದೆ ಸಿದ್ದರಾಮಯ್ಯ ಅವರೇ. ಗಾಜಿನ ಮನೆಯಲ್ಲಿ ಕೂತು ಕಚ್ಚೆ ಕಟ್ಟಬೇಡಿ. ಖರೀದಿಸಿದ ಬಟ್ಟೆ ಕೆಲವು ನಿಮ್ಮ ಮಹಾರಾಷ್ಟ್ರದ ಮಂತ್ರಿಗಳಿಗೂ ಕೊಡಿ - ಪೂರ್ತಿಯಾಗಿ ಬಿಚ್ಚಿ ಹೋಗಿದೆ ಅಲ್ಲಿ. ಉಳಿದರೆ ನೆಹರೂ ಪರಿವಾರಕ್ಕೂ ಕೊಡಿ - ಮಹಾರಾಷ್ಟ್ರ, ಬಂಗಾಳದಲ್ಲಿ ಬೆವರಿಳಿಯುವಾಗ ಒರೆಸಲು ಬೇಕಾಗಬಹುದು" ಎಂದು ವ್ಯಂಗ್ಯವಾಡಿದೆ.
"ಅಂದ ಹಾಗೆ ಸಿದ್ದರಾಮಯ್ಯನವರೇ, ಚಾಮುಂಡೇಶ್ವರಿಯಲ್ಲಿ ಜನ ನಿಮ್ಮನ್ನು ಸೋಲಿಸಿ ಬೆತ್ತಲು ಮಾಡಿದ್ದರ ಹಿಂದೆ ನಿಮ್ಮ ಕಾಲೇಜು ದಿನಗಳಿಂದಲೂ ರೂಡಿಸಿಕೊಂಡು ಬಂದ ಬಟ್ಟೆ ಖರೀದಿ ಖಯಾಲಿಯೂ ಕಾರಣವಂತೆ !. ನಿಜವೇ ಮಾನ್ಯ ವಲಸೆರಾಮಯ್ಯ ಅವರೇ?. ರಂಗು ರಂಗಿನ ಬಟ್ಟೆ ಖರೀದಿಯಲ್ಲಿ ನೀವು ನೆಹರೂ ಕುಟುಂಬವನ್ನು ಮೀರಿಸುವಷ್ಟು ಮಜಾವಾದಿ ಬಿಡಿ ಅಪ್ಪ" ಎಂದು ಕಾಲೆಳೆದಿದೆ.
"ಎಲ್ಲೆಲ್ಲೋ ಹೋಗಿ ಬಟ್ಟೆಬಿಚ್ಚಿ ಮರ್ಯಾದೆ ಕಳೆಯುತ್ತಿರುವ ಕರ್ನಾಟಕ ಬಿಜೆಪಿಯ ನಾಯಕರಿಗೆ ದಾನ ಮಾಡೋಣ ಎಂದು 90 ಜೊತೆ ಬಟ್ಟೆ ಖರೀದಿ ಮಾಡಿದ್ದೇನೆ. ಬೇಕಿದ್ದರೆ ನಳಿನ್ ಕುಮಾರ್ ಕಟೀಲು ಅವರಿಗೂ ಒಂದೆರಡು ಜೊತೆ ಬಟ್ಟೆ ದಾನ ಮಾಡುತ್ತೇನೆ. ಇನ್ನೂ 19 ಸಿಡಿ ಇದೆಯಂತೆ, ಎಲ್ಲವೂ ಹಿಡಿತದಲ್ಲಿರಲಿ, ನಾಲಗೆ ಕೂಡಾ" ಎಂದು ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದರು.