ಬೆಂಗಳೂರು, ಮಾ 02 (DaijiworldNews/MS): ಅಸ್ಸಾಂನ ಮುಂಬರುವ ವಿಧಾನ ಸಭಾ ಚುನಾವಣೆಯ ಪ್ರಚಾರಕ್ಕೆ ಧುಮುಕಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಚಹಾ ತೋಟಕ್ಕೆ ಭೇಟಿ ನೀಡಿ ಅವರು ಅಲ್ಲಿನ ಕಾರ್ಮಿಕರ ಜೊತೆ ಟೀ ಎಲೆ ಬಿಡಿಸುವ ಕೆಲಸ ಮಾಡಿ ಗಮನ ಸೆಳೆದಿದ್ದಾರೆ. ಆದರೆ ಇದಕ್ಕೆ ರಾಜ್ಯ ಬಿಜೆಪಿಯೂ ವ್ಯಂಗ್ಯವಾಡಿದ್ದು "ಚಹಾ ಮಾರಿದವರು ಪ್ರಧಾನಿಯಾದರು ಎಂದ ಮಾತ್ರಕ್ಕೆ ಚಹಾದ ಎಲೆ ಕಿತ್ತರೆ ಕಾಂಗ್ರೆಸ್ ಗೆಲ್ಲುವುದಿಲ್ಲ" ಎಂದು ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ " ಇಂದಿರಾ ಗಾಂಧಿಯಂತೆ ಹೇರ್ ಸ್ಟೈಲ್ ಮಾಡಿದ್ದಾಯಿತು, ಅಜ್ಜಿಯಂತಹ ಸೀರೆ ಉಟ್ಟುಕೊಂಡಾಯಿತು, ಮೂಗು ಅಜ್ಜಿಯಂತಿದೆ ಎಂದಾಯಿತು. ಚುನಾವಣೆಯನ್ನು ಗೆಲ್ಲಲು ಕಾಂಗ್ರೆಸ್ ಪಕ್ಷ ಹೀಗೆಲ್ಲ ಕಸರತ್ತು ಮಾಡಿತ್ತು, ಆದರೂ ನೆಲಕಚ್ಚಿ ಹೋಗಿತ್ತು. ಚಹಾ ಮಾರಿದವರು ಪ್ರಧಾನಿಯಾದರು ಎಂದ ಮಾತ್ರಕ್ಕೆ ಚಹಾದ ಎಲೆ ಕಿತ್ತರೆ ಕಾಂಗ್ರೆಸ್ ಗೆಲ್ಲುವುದಿಲ್ಲ.
ಪ್ರಿಯಂಕಾಗಾಂಧಿ "ಆರ್ಟ್ ಆಫ್ ಫೂಲಿಂಗ್ ಪೀಪಲ್" ಅನ್ನು ಕರಗತ ಮಾಡಿಕೊಂಡಿದ್ದಾರೆ. ತನ್ನ ಕುಟುಂಬವು ಇನ್ನು ಮುಂದೆ ಭಾರತೀಯರನ್ನು ಮರುಳು ಮಾಡಲು ಸಾಧ್ಯವಿಲ್ಲ ಎಂದು ಅವರಿಗೆ ಇನ್ನು ಅವರು ಅರಿತಿಲ್ಲ! ! !" ಎಂದು ವ್ಯಂಗವಾಡಿದೆ.
ಪ್ರಿಯಂಕಾಗಾಂಧಿ ಅವರು ಪ್ರಚಾರದ ವೇಳೆ ಅಸ್ಸಾಂನ ಚಹಾ ತೋಟಕ್ಕೆ ಭೇಟಿ ನೀಡಿ ಕಾರ್ಮಿಕರು ಧರಿಸುವ ವಸ್ತ್ರದಂತೆ ತಲೆಗೆ, ಸೊಂಟಕ್ಕೆ ಬಟ್ಟೆ ಕಟ್ಟಿ, ಬೆನ್ನಿಗೆ ಬುಟ್ಟಿಯನ್ನು ಇಟ್ಟುಕೊಂಡು ಕೆಲಸ ಅಲ್ಲಿನ ಕಾರ್ಮಿಕರ ಜೊತೆ ಚಹಾ ಎಲೆ ಬಿಡಿಸುವ ಕೆಲಸ ಮಾಡಿ ಗಮನ ಸೆಳೆದಿದ್ದರು.