ಬೆಂಗಳೂರು, ಮಾ 02 (DaijiworldNews/MS): ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಕೆದರಿದ್ದು, ಅಲ್ಲಿ ಬಿಜೆಪಿಯನ್ನು ಬಲಪಡಿಸಿ ಎಐಎಡಿಎಂಕೆ ಮೈತ್ರಿ ಸರಕಾರವನ್ನು ಮತ್ತೆ ಅಧಿಕಾರಕ್ಕೆ ತರಲು ಭಾರತೀಯ ಜನತಾ ಪಕ್ಷವೂ ರಣತಂತ್ರ ರೂಪಿಸುತ್ತಿದ್ದು, ಇದಕ್ಕಾಗಿ ಕರ್ನಾಟಕ ರಾಜ್ಯದಿಂದ ನಾಯಕರ ತಂಡವೊಂದು ರಚನೆಯಾಗಿದೆ.
ತಮಿಳುನಾಡಿನಲ್ಲಿ ಬಿಜೆಪಿ ಪಕ್ಷವನ್ನು ಬಲಪಡಿಸುವುದರ ಜೊತೆಗೆ ಮೈತ್ರಿ ಪಕ್ಷವಾದ ಎಐಎಡಿಎಂಕೆ ಅಭ್ಯರ್ಥಿಗಳ ವಿಜಯಕ್ಕೂ ಶ್ರಮಿಸುವ ಕುರಿತು ಕಾರ್ಯತಂತ್ರ ರೂಪಿಸುವಂತೆ ಈ ತಂಡಕ್ಕೆ ಪಕ್ಷ ಸೂಚನೆ ನೀಡಿದೆ. ಸೋಮವಾರ ರಾಜ್ಯ ರಾಜಧಾನಿಯಲ್ಲಿ ನಡೆದ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಸುಮಾರು 50 ಮಂದಿ ಪ್ರತಿನಿಧಿಗಳನ್ನು ಕಳುಹಿಸಲು ನಿರ್ಧರಿಸಲಾಗಿದ್ದು, ತಮಿಳುನಾಡಿನಲ್ಲಿ ಎಐಎಡಿಎಂಕೆಯೊಂದಿಗೆ ಸೀಟು ಹಂಚಿಕೆಯಾದ ಬಳಿಕ ಭಾರತೀಯ ಜನತಾ ಪಾರ್ಟಿಗೆ ಸಿಗುವ ಕ್ಷೇತ್ರಗಳ ಪಟ್ಟಿ ಬಿಡುಗಡೆಯಾದ ಬಳಿಕ ಈ ತಂಡಕ್ಕೆ ಅಧಿಕೃತ ಜವಾಬ್ದಾರಿ ವಹಿಸಲಾಗುತ್ತದೆ.
ಇನ್ನೊಂದೆಡೆ ಕೇರಳದ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗಾಗಿ ಶ್ರಮಿಸಲು ಪ್ರಹ್ಲಾದ್ ಜೋಶಿ, ಡಿಸಿಎಂ ಡಾ| ಅಶ್ವತ್ಥ್ ನಾರಾಯಣ, ಸುನಿಲ್ ಕುಮಾರ್ ಗೆ ಸೂಚಿಸಲಾಗಿದ್ದು, ಈ ಹಿನ್ನಲೆಯಲ್ಲಿ ನೆರೆ ರಾಜ್ಯಕ್ಕೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಂದ 40 ಜನರ ತಂಡ ಕಳುಹಿಸಲಾಗಿದೆ. ಇನ್ನು ಕಾಂಗ್ರೆಸ್ ನಿಂದಲೂ ಕೇರಳಕ್ಕೆ ಐವನ್ ಸೋಜಾ, ಪಿ.ಯು. ಮೋಹನ್ ಅವರನ್ನು ನೇಮಕ ಮಾಡಲಾಗಿದೆ.