ಬೆಂಗಳೂರು,ಮಾ.27 (DaijiworldNews/AK): ವಿಧಾನಪರಿಷತ್ತಿನ ಒಬ್ಬ ಸದಸ್ಯರು ತಮ್ಮ ಜೀವಕ್ಕೆ ಬೆದರಿಕೆ ಇದೆ; ಆತಂಕ ಇದೆ; ಕೊಲೆ ಷಡ್ಯಂತ್ರ ನಡೆದಿದೆ, ಕೊಲೆ ಪ್ರಯತ್ನ ನಡೆದಿದೆ ಎನ್ನುವುದಾದರೆ ಈ ರಾಜ್ಯದಲ್ಲಿ ಈ ಸರಕಾರವು ಕಾನೂನು- ಸುವ್ಯವಸ್ಥೆಯ ಸಮಾಧಿ ಕಟ್ಟಿದೆ ಎಂಬುದಾಗಿ ಜನಸಾಮಾನ್ಯರು ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ತಿಳಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹನಿಟ್ರ್ಯಾಪ್ ಬಗ್ಗೆ ತಾವು ಲಿಖಿತ ದೂರು ಕೊಡುವುದಾಗಿ ಎಂಎಲ್ಸಿ ರಾಜೇಂದ್ರ ಮತ್ತು ಅವರ ತಂದೆ ರಾಜಣ್ಣ ಹೇಳಿದ್ದರು. ಹನಿಟ್ರ್ಯಾಪ್ ಪ್ರಕರಣ ಯಾವಾಗ ಅವರ ಬುಡಕ್ಕೇ ಸುತ್ತಿಕೊಳ್ಳಲು ಆರಂಭವಾಯಿತೋ, ಆಗ ರಾಜೇಂದ್ರ ಅವರು ತಮ್ಮ ಮಾತಿನಿಂದ ಹಿಂದೆ ಸರಿದಿದ್ದಾರೆ ಎಂದು ಟೀಕಿಸಿದರು.
ಈಗ ಹೊಸ ತಿರುವು ಕೊಟ್ಟು ನನ್ನ ಕೊಲೆಗೆ ಸಂಚು ನಡೆದಿದೆ ಎಂದು ದೂರು ಕೊಡುವುದಾದರೆ ಸತ್ಯವನ್ನು ಮರೆ ಮಾಚುತ್ತಿದ್ದಾರೆ; ರಾಜ್ಯದ ಜನರ ಗಮನವನ್ನು ಬೇರೆ ಕಡೆ ತಿರುಗಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ನನಗೆ ಅನಿಸುತ್ತಿದೆ ಎಂದರು.
ಈ ಸರಕಾರವು ತನಿಖಾ ಸಂಸ್ಥೆಗಳನ್ನು ಎಷ್ಟು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದರೆ, ಇನ್ನೆರಡು ದಿನಗಳಲ್ಲಿ ಯಾವುದಾದರೂ ಅಮಾಯಕರನ್ನು ತಂದು ಜೈಲಿಗೆ ಹಾಕಲಿದ್ದಾರೆ. ಈ ಸರಕಾರವು ಸಚಿವರು ಮಾಡಿದ ದೊಡ್ಡ ದೊಡ್ಡ ಆರೋಪಗಳ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಲೇ ಇಲ್ಲ ಎಂದು ಆರೋಪಿಸಿದರು.
ಜನರಿಗೆ ತೋರಿಸಬೇಕೆಂಬ ಕಾರಣಕ್ಕೆ ಯಾರನ್ನೋ ಒಬ್ಬನನ್ನು ಬಂಧಿಸುವುದು, ಬೇಕಾದಂತೆ ಅವನ ಹೇಳಿಕೆ ದಾಖಲಿಸುವುದು, ಒಬ್ಬ ಅಮಾಯಕನನ್ನು ಜೈಲಿಗೆ ಕಳಿಸುವ ಕೆಲಸ ಆಗುತ್ತಿದೆ. ರಾಜೇಂದ್ರ ಅವರ ಹೇಳಿಕೆಗೆ ಈ ರಾಜ್ಯದಲ್ಲಿ ಯಾರು ಬಲಿಪಶು ಆಗಲಿದ್ದಾರೆ; ಈ ರಾಜ್ಯ ಕಾದು ನೋಡಬೇಕಿದೆ ಎಂದು ತಿಳಿಸಿದರು. ಸರಕಾರದಿಂದ ತನಿಖಾ ಸಂಸ್ಥೆಗಳ ದುರುಪಯೋಗ ಆಗುತ್ತಿದೆ ಎಂದು ಅವರು ದೂರಿದರು.