Karavali
ಉಳ್ಳಾಲ: 'ಯು.ಟಿ ಖಾದರ್ ಅಧಿಕೃತ 3,500 ಕೋಟಿ ರೂ.ಗಳ ಒಡೆಯ' - ರಿಯಾಝ್ ಫರಂಗಿಪೇಟೆ ಆರೋಪ
- Mon, Apr 17 2023 10:18:49 PM
-
ಉಳ್ಳಾಲ, ಏ17 (DaiiworldNews/HR): ಉಳ್ಳಾಲ ಶಾಸಕ ಯು.ಟಿ ಖಾದರ್ ರೂ.3,500 ಕೋಟಿ ಅಧಿಕೃತ ಒಡೆಯ ಹಾಗೂ 10,000 ಕೋಟಿಗಳ ಅನಧಿಕೃತ ಒಡೆಯನಾಗಿದ್ದಾರೆ ಎಂದು ಉಳ್ಳಾಲದ ಎಸ್ ಡಿಪಿಐ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಗಂಭೀರವಾಗಿ ಆರೋಪಿಸಿದ್ದಾರೆ.
ತೊಕ್ಕೊಟ್ಟುವಿನ ಮೈದಾನದಲ್ಲಿ ಜರಗಿದ ಎಸ್ ಡಿಪಿಐ ಮಂಗಳೂರು ವಿಧಾಸನಭಾ ಕ್ಷೇತ್ರದ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಪ್ರಯುಕ್ತ ಹಮ್ಮಿಕೊಳ್ಳಲಾದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸರಳ ವ್ಯಕ್ತಿತ್ವ, ಸ್ಟೀಲ್ ಲೋಟದಲ್ಲಿ ಚಹಾ ಕುಡಿಯುವವರು ಕೆ.ಟಿಯನ್ನು ಸೇವಿಸುವವರು ಉಳ್ಳಾಲದ ಶಾಸಕರು. ಚುನಾವಣೆ ಬಂದಾಗ ಎಲ್ಲರಿಂದಲೂ ಹಣ ಸಂಗ್ರಹಿಸಿ ಚುನಾವಣೆ ಎದುರಿಸುತ್ತಾರೆ. ಆದರೆ ಅವರ ಜತೆಗಿರುವ ಕಾಂಗ್ರೆಸ್ ಕಾರ್ಯಕರ್ತರು ಯುಎಇ ಯ ಬರ್ ದುಬಾಯಿಯಲ್ಲಿರುವ ಎನ್ ಬಿಡಿ ಎಮಿರೇಟ್ಸ್ ಬ್ಯಾಂಕಿನಲ್ಲಿ ಯು.ಟಿ ಅಬ್ದುಲ್ ಖಾದರ್ ಅಲೀಫ್ ಆಲಿ ಹೆಸರಿನಲ್ಲಿರುವ 3,500 ಕೋಟಿ ರೂ. ಮತ್ತು 10,000 ಕೋಟಿ ರೂ. ಯಾರದ್ದು ಅನ್ನುವುದನ್ನು ಪ್ರಶ್ನಿಸಬೇಕಿದೆ ಎಂದರು.
ಇನ್ನು 2013ರಿಂದ 2019 ರವರೆಗೆ ಇದೇ ಹೆಸರಿನಲ್ಲಿ ದುಡ್ಡು ಜಮಾವಣೆ ಆಗಿದೆ. 2019ರ ಇಡಿ ಮತ್ತು ಐಟಿ ದಾಳಿಗೆ ಹೆದರಿ ಅದೇ ಹಣ ಮತ್ತೆ ಯುಕೆ ಬ್ಯಾಂಕಿಗೆ ವರ್ಗಾಯಿಸಲಾಗಿದೆ. ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಆಕ್ಟ್ ಶಾಸಕರ ಟೇಬಲಿಗೆ ಬರುವ ದಿನಗಳು ದೂರವಿಲ್ಲ. ಚುನಾವಣೆಯನ್ನು ಚುನಾವಣೆ ರೀತಿಯಲ್ಲಿ ಎದುರಿಸಿ, ಕಾರ್ಯಕರ್ತರ ಸಂಬಂಧಿಕರಲ್ಲಿ ಹೆದರಿಸುವ ಶಕುನಿ ತಂತ್ರದ ಕೆಲಸವನ್ನು ಬಿಟ್ಟುಬಿಡಿ ಎಂದ ಅವರು ಉಳ್ಳಾಲದಲ್ಲಿ ಎಸ್ಡಿಪಿಐನ ಹೋರಾಟ ಹತ್ತಿಕ್ಕುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಲೇ ಇದೆ. ಯುನಿಟಿ ಸಭಾಂಗಣದಲ್ಲಿ ನಡೆಯಬೇಕಾಗಿದ್ದ ಕಾರ್ಯಕ್ರಮಕ್ಕೆ ಸಭಾಂಗಣದ ಮಾಲೀಕರಿಗೆ ಒತ್ತಡ ಹೇರಿ ಅವಕಾಶ ಕಲ್ಪಿಸದಂತೆ ನೋಡಿಕೊಂಡಿದ್ದಾರೆ. ಹುಟ್ಟು ಹೋರಾಟಗಾರರಿಗೆ ಸಭಾಂಗಣದ ಅವಶ್ಯಕತೆ ಬರುವುದಿಲ್ಲ. ಸುಡುಬಿಸಿಲಿನಲ್ಲೇ ಕುಳಿತು ಸಾರ್ವಜನಿಕ ಸಭೆಯನ್ನು ನಡೆಸಿದ್ದೇವೆ. ಸುಡುಬಿಸಿಲಿನಲ್ಲಿ ಕುಳಿತುಕೊಳ್ಳುವಂತೆ ಮಾಡಿದವರಿಗೆ ಶಾಪ ತಟ್ಟದೇ ಬಿಡುವುದಿಲ್ಲ ಎಂದಿದ್ದಾರೆ.
ಈವರೆಗೆ ಗ್ಯಾರಂಟಿ ನೀಡಿರುವುದನ್ನು ಕೊಡಲಾಗದವರು ಮತ್ತೆ ಗ್ಯಾರಂಟಿ ಕಾರ್ಡನ್ನು ತೋರಿಸಿ ಮತಯಾಚನೆ ನಡೆಸುತ್ತಿದ್ದು, ಉಳ್ಳಾಲದ ಮಹಿಳೆಯರು ಇಂತಹ ರಾಜಕೀಯಕ್ಕೆ ಚಪ್ಪಲಿಯಲ್ಲಿ ಹೊಡೆಯಲಿದ್ದಾರೆ. 12 ವರ್ಷಗಳ ಹಿಂದೆ ತೊಕ್ಕೊಟ್ಟುವಿನಿಂದ ಮೆಲ್ಕಾರ್ ಮಂಜೂರಾದ ರಸ್ತೆಯನ್ನು ನಿಧಾನಗತಿಯಲ್ಲಿ ನಡೆಸಿ ಅದನ್ನೇ ಅಭಿವೃದ್ಧಿ ಎಂದು ಹೇಳುತ್ತಿದ್ದಾರೆ. ಮಾಸ್ತಿಕಟ್ಟೆಯ 12 ಎಕರೆ ಜಾಗದಲ್ಲಿ ಕ್ರೀಡಾಭಿವೃದ್ಧಿ ಇಲಾಖೆ, ಮೂಡ ಇಲಾಖೆ ಸುಸಜ್ಜಿತ ಕ್ರೀಡಾಂಗಣ ಮತ್ತು ಸ್ವಿಮ್ಮಿಂಗ್ ಪೂಲ್ ನಿರ್ಮಾಣಕ್ಕೆ ಜಾಗ ಮಂಜೂರಾತಿಗೊಳಿಸಿದರೂ , ಜಾಗದ ಮಾಲೀಕ ಕಮೀಷನ್ ಕೊಡಲು ನಿರಾಕರಿಸಿರುವುದಕ್ಕೆ ಯೋಜನೆಯನ್ನೇ ಶಾಸಕರು ವಾಪಸ್ಸು ಕಳುಹಿಸಿರುವುದು ನಾಚಿಕೆಗೇಡು. ಒಂಭತ್ತುಕೆರೆಯ 390 ಮನೆಗಳನ್ನು ತೆಗೆದು ಸುಸಜ್ಜಿತ ವಸತಿ, ವಾಣಿಜ್ಯ ಕಟ್ಟಡ ನಿರ್ಮಿಸುವುದನ್ನು ಹೇಳಿದ್ದರೂ ಈವರೆಗೆ ಈಡೇರಿಲ್ಲ. ಖಾಸಗಿ ವೈದ್ಯಕೀಯ ಕಾಲೇಜಿನವರು ನೀಡುತ್ತಿರುವ ಕಿಕ್ ಬ್ಯಾಕ್ ನಿಂದ ಮುಂದೆಯೂ ಸರಕಾರಿ ಆಸ್ಪತ್ರೆಗಳು ಆಗುವುದು ಮರೀಚಿಕೆ ಎಂದರು.
ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲ ಜೋಕಟ್ಟೆ ಮಾತನಾಡಿ, ಭಯಮುಕ್ತ, ಹಸಿವುಮುಕ್ತ ಶೋಷಿತ ಸಮುದಾಯಗಳಿಗೆ ರಾಜಕೀಯ ಅಧಿಕಾರ ಧಕ್ಕಿಸಿಕೊಡುವ ಉದ್ದೇಶ, ಸಮಸಮಾಜ ನಿರ್ಮಾಣದ ಗುರಿಯೊಂದಿಗೆ ಇರುವ ಏಕೈಕ ಪಕ್ಷ ಎಸ್ ಡಿಪಿಐ. ಪಕ್ಷದ ಅಧಿಕಾರ ನಡೆಸುವ ಎರಡು ಗ್ರಾ.ಪಂ ಗಳು ಕೂಡಾ ಮಂಗಳೂರು ಮಂಡಲದಲ್ಲೇ ಇದೆ. ಉಳ್ಳಾಲದ ಶಾಸಕ ಯು.ಟಿ ಖಾದರ್ ಅವರು ತಂದೆಯ ಅಕಾಲಿಕ ನಿಧನ ಸಂದರ್ಭ, ಕಾಂಗ್ರೆಸ್ ಒಳಗಿನ ನಾಯಕರೇ ಖಾದರ್ ಚುನಾವಣೆಯಲ್ಲಿ ಅಡ್ಡಗಾಲು ಹಾಕಿದ್ದಾಗ ಅಂದು ಇದ್ದ ಪಿಎಫ್ ಐ ಮುಖಂಡರ ಕಾಡಿಬೇಡಿ ಬೆಂಬಲ ಯಾಚಿಸಿರುವುದು ಎಲ್ಲರಿಗೂ ನೆನಪಿದೆ. ದೇಶಕ್ಕೆ ಮಾರಕವಾಗಿರುವ ಸಂಘಪರಿವಾರದ ವಿರುದ್ಧ ಗಟ್ಟಿ ದನಿಯಾಗಿ ಮಾತನಾಡಿದ್ದು ಎಸ್ ಡಿಪಿಐ. ಸಂವಿಧಾನ ವಿರೋಧಿಗಳಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಅಂದವರು ಬಳಿಕ ಸಂಘಪರಿವಾರದ ಮೇಲಿನ ಪ್ರೀತಿಯಿಂದ ಕ್ಷಮೆಯಾಚಿಸಿದ್ದರು. ಆದರೆ ಅದೇ ಸಂಘಪರಿವಾರದವರು ಹಿಂದೂ ಸಮಾಜೋತ್ಸವ ಸಂದರ್ಭ ಖಾದರ್ ಕುತ್ತಿಗೆ ಕಡಿಯಬೇಕು ಅಂದಾಗ ಅವರಿಗೆ ಖಾದರ್ ಕ್ಷಮೆಯನ್ನು ನೀಡಿರುವುದು ಬಿಜೆಪಿ ಪರ ಓಲೈಕೆಯಲ್ಲಿರುವುದು ಸ್ಪಷ್ಟವಾಗಿದೆ. ಹಿಜಾಬ್ ಸಂದರ್ಭ ಸಹೋದರಿಯರ ಕಣ್ಣೀರು ಕಂಡಾಗ, ಕರಾವಳಿಯ ಏಕೈಕ ಮುಸ್ಲಿಂ ಶಾಸಕನ ಮಾತನ್ನು ಉಳ್ಳಾಲದ ಜನತೆ ಮರೆಯಬಾರದು. ಕಲಿಕೆ ಮೊಟಕುಗೊಳಿಸಿ ಕಣ್ಣೀರು ಹಾಕುತ್ತಿದ್ದ ವಿದ್ಯಾರ್ಥಿನಿಯರು ಪಾಕಿಸ್ತಾನ, ಸೌದಿ ಅರೆಬಿಯಾಕ್ಕೆ ಹೋಗಿ ಅಂದಿರುವುದನ್ನು ನೆನಪಿಸಬೇಕಿದೆ. ಹಿಂದೆ ಯು.ಟಿ ಖಾದರ್ ಗೆಲ್ಲಿಸಿದವರು ನಾವೇ,ಆದರೆ ಅಂತಹವರು ಸಮುದಾಯದ ದನಿಯಾಗದ ಸಂದರ್ಭ ಹಕ್ಕುದಾರರಾದ ಸಮುದಾಯದವರು ಕೆಳಗಿಳಿಸಬೇಕಾಗಿರುವುದು ಅನಿವಾರ್ಯ. 2018 ರ ಮೊದಲ ಎಷ್ಟು ಜನರಿಗೆ ಸರಕಾರಿ ಉದ್ಯೋಗ ದೊರಕಿಸಿಕೊಟ್ಟಿದ್ದೀರಿ.ಸುಸಜ್ಜಿತ ಕ್ರೀಡಾಂಗಣ, ಶಾಶ್ವತ ಕುಡಿಯುವ ನೀರು ವ್ಯವಸ್ಥೆಗಳೇ ಇಲ್ಲ . ಖಾದರ್ ಆಶೀರ್ವಾಧಿಂದ ಖಾಸಗಿ ವೈದ್ಯಕೀಯ ಕಾಲೇಜುಗಳು ಕ್ಷೇತ್ರದುದ್ದಕ್ಕೂ ಕಾರ್ಯಚರಿಸಿದರೂ ಈವರೆಗೆ ಸರಕಾರಿ ಆಸ್ಪತ್ರೆಗಳೇ ಇಲ್ಲ. ಸುಸಜ್ಜಿತ ಮಾರುಕಟ್ಟೆಯಿಲ್ಲ, ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲಿಲ್ಲ, ಕಲ್ಲುಗಳು ನೀರಿಗೆ ಹಾಕುವುದರಲ್ಲಿ ನಿರಂತರ ಕಮೀಷನ್ ಪಡೆಯುವುದರ ಜೊತೆಗೆ ಆಶ್ರಯ ಯೋಜನೆಯಡಿ ನಿರ್ಮಿಸಿದ ಕೋಳಿಗೂಡಿನಂತೆ ನಿರ್ಮಿಸಿ 390 ಕುಟುಂಬಗಳಿಗೆ ಮನೆ ಇಲ್ಲದಂತೆ ಮಾಡಲು ಖಾದರ್ರೇ ಕಾರಣ. ಜನಸಂದಣಿ ಇರುವ ಉಳ್ಳಾಲದ ಕೋಡಿಯಲ್ಲಿ ಯುಜಿಡಿ ಸಂಸ್ಕರಣಾ ಘಟಕವನ್ನು ನಿರ್ಮಿಸಲು ಹೊರಟು ಕೋಡಿಯ ಜನರ ಮೇಲಿರುವ ಹಗೆತನವೇ ಕಾರಣ. ಈ ಬಾರಿಯ ಚುನಾವಣೆ ಸತ್ಯ ಮತ್ತು ಮಿಥ್ಯದ ನಡುವೆ ಆಗಿರುತ್ತದೆ ಎಂದರು.
ಎಸ್ ಡಿಪಿಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ಮಾತನಾಡಿ, ಕ್ಷೇತ್ರದಲ್ಲಿ ಜೀವಿಸುವ ಕಡುಬಡವ ಸಾಮಾನ್ಯ ಜನರ ಸಮಸ್ಯೆಗಳಿಗೆ ದನಿಯಾಗಲು ರಿಯಾಝ್ ನಾಮಪತ್ರ ಸಲ್ಲಿಸಿದ್ದಾರೆ. ನಾಮಿನೇಷನ್ ಹಾಕುವ ಸಂಶಯ ವ್ಯಕ್ತಪಡಿಸಿದವರಿಗೆ ಇಂದು ಉತ್ತರ ಸಿಕ್ಕಿದೆ. ಎ.24 ರಂದು ಇನ್ನೊಂದು ಉತ್ತರವೂ ಸಿಗಲಿದೆ. ರಾಜ್ಯದುದ್ದಕ್ಕೂ ಪಕ್ಷಾಂತರ ಪರ್ವ ಆರಂಭವಾಗಿದೆ. ಕಾಂಗ್ರೆಸ್-ಬಿಜೆಪಿ ಪಕ್ಷದ ಬದಲಾವಣೆಯಾಗುತ್ತಿದೆಯೇ ಹೊರತು ಶಾಸಕರು ಅವರುಗಳೇ ಆಯ್ಕೆಯಾಗಿ ಬರುತ್ತಿದ್ದಾರೆ. ರಾಜ್ಯಕ್ಕೆ ಹೋರಾಟ ನಡೆಸುವ ಕೆಚ್ಚೆದ ನಾಯಕರ ಅವಕಾಶವಿದೆ ಎಂದರು.
ರಾಷ್ಟ್ರೀಯ ಸಮಿತಿ ಸದಸ್ಯ ಎನ್.ಯು. ಅಬ್ದುಲ್ ಸಲಾಂ, ರಾಜ್ಯ ಸಮಿತಿ ಸದಸ್ಯರುಗಳಾದ ಮಜೀದ್ ಖಾನ್, ಶಹೀದಾ ತಸ್ನೀಮ್, ಜಿಲ್ಲಾ ಪ್ರ.ಕಾ ಅನ್ವರ್ ಸಆದತ್ ಬಜತ್ತೂರು. ರಾಜ್ಯ ಚುನಾವಣಾ ಸಹ ಉಸ್ತುವಾರಿ ನವಾಝ್ ಉಳ್ಳಾಲ್, ಜಿಲ್ಲಾ ಉಪಾಧ್ಯಕ್ಷೆ ಮಿಸ್ರಿಯಾ ಕಣ್ಣೂರು, ಜಿಲ್ಲಾ ಕಾರ್ಯದರ್ಶಿ ಸುಹೈಲ್ ಖಾನ್, ಜಿಲ್ಲಾ ಉಪಾಧ್ಯಕ್ಷ ರವಿ ಕುಟಿನ್ಹಾ, ಅಶ್ರಫ್ ಮಂಚಿ, ಉಬೈದ್ ಅಮ್ಮೆಂಬಳ, ಸಲಾಮ್ ವಿದ್ಯಾನಗರ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಖಮರುನ್ನೀಸಾ ಪಾವೂರು, ಅನ್ಸಾರ್ ಇನೋಳಿ, ಎಸ್.ಎನ್ ಇಕ್ಬಾಲ್ ಸಜಿಪ, ಸಂತೋಷ್ ಮೊಂತೇರೊ, ಸುನಿತಾ ಸಲ್ದಾನ್ಹ, ನವೀನ್ ಸಲ್ದಾನ್ಹ, ರೆಬೆಕಾ ಸಲ್ದಾನ್ಹ, ಮತ್ತು ಅಬ್ದುಲ್ ರಹಿಮಾನ್ ಮುನ್ನೂರು ಉಪಸ್ಥಿತರಿದ್ದರು.