ಕುಂದಾಪುರ, ಏ 11(DaijiworldNews/MS): ಉಡುಪಿ ಜಿಲ್ಲೆಯಲ್ಲಿರುವ ೨೦೯ ಮಂದಿ ಶತಾಯುಷಿ ಮತದಾರರಿಗೆ ಮೇ 10 ರಂದು ನಡೆಯುವ ಮತದಾನದಲ್ಲಿ ಭಾಗವಹಿಸುವಂತೆ ಜಿಲ್ಲಾ ಸ್ವೀಪ್ ಸಮಿತಿಯಿಂದ ವಿಶೇಷ ಆಹ್ವಾನ ನೀಡಲಾಗುತ್ತಿದ್ದು, ತಲ್ಲೂರು ಗ್ರಾ.ಪಂ. ವ್ಯಾಪ್ತಿಯ ಉಪ್ಪಿನಕುದ್ರುವಿನಲ್ಲಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅವರು ಸೋಮವಾರ ಸಂಜೆ ಶತಾಯುಷಿ ಮತದಾರೆ 101 ವರ್ಷದ ಆಲಿಸ್ ಅವರಿಗೆ ಆಹ್ವಾನ ಪತ್ರವನ್ನು ನೀಡುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಸ್ವೀಪ್ ಸಮಿತಿಯಿಂದ ವಿಶೇಷ ಆಹ್ವಾನ ನೀಡಲಾಗುವ ಅಭಿಯಾನ ಹಮ್ಮಿಕೊಂಡಿದ್ದು, ಉಪ್ಪಿನಕುದ್ರುವಿನಲ್ಲಿ ಶತಾಯುಷಿಯೊಬ್ಬರಿಗೆ ಮೊದಲಿಗೆ ಆಹ್ವಾನ ಕೊಟ್ಟಿದ್ದೇವೆ. ಈವರೆಗಿನ ಚುನಾವಣೆಯೆಲ್ಲ ಭಾಗವಹಿಸಿದ್ದು, ಅವರನ್ನು ಅದಕ್ಕಾಗಿ ಸಮ್ಮಾನಿಸಿದ್ದೇವೆ. ಇದೊಂದು ಖುಷಿಯ ಸಂಗತಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ದೊಡ್ಡ ಹಬ್ಬ. ಇವರು ಪ್ರತಿ ಚುನಾವಣೆಯಲ್ಲೂ ಭಾಗವಹಿಸಿದ್ದಾರೆ. ಇಂತಹ ಶತಾಯುಷಿ ಮತದಾರರು ನಮ್ಮ ಜಿಲ್ಲೆಯ ಹೆಮ್ಮೆ. ಉಡುಪಿ ಜಿಲ್ಲೆಯ ಮತದಾರರು ತಾವೆಲ್ಲರೂ ಇವರನ್ನು ಪ್ರೇರಣೆಯಾಗಿಟ್ಟುಕೊಂಡು, ಮತದಾನ ಪ್ರಕ್ರಿಯೆಯಲ್ಲಿ ‘ಭಾಗವಹಿಸಿ. ವಿಶೇಷವಾಗಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಅನ್ನುವುದನ್ನು ನಮ್ಮ ಸಹಾಯವಾಣಿ, ಮತಗಟ್ಟೆ ಅಧಿಕಾರಿಗಳ ಬಳಿ ಖಚಿತಪಡಿಸಿಕೊಳ್ಳಿ ಎಂದವರು ಹೇಳಿದರು.
ಮತದಾನ ಮಾಡಿ..
ಇದೇ ವೇಳೆ 101ವರ್ಷದ ಆಲಿಸ್ ಅವರನ್ನು ಜಿಲ್ಲಾಡಳಿತದ ವತಿಯಿಂದ ಸಮ್ಮಾನಿಸಲಾಯಿತು. ಈ ವೇಳೆ ಸಂತಸ ವ್ಯಕ್ತಪಡಿಸಿದ ಅವರು, ನಾನು ಪ್ರತಿ ಸಲ ಮತದಾನ ಮಾಡಿದ್ದೇನೆ. ನೀವೆಲ್ಲ ಮತದಾನ ಮಾಡಿ. ಎಲ್ಲರೂ ಮತದಾನದಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದರು. 19 ವರ್ಷದ ನಿಶಾಂತ್ ಪ್ರಥಮ ಬಾರಿಗೆ ಈ ಬಾರಿ ಮತ ಚಲಾಯಿಸುತ್ತಿದ್ದು, ಈ ವಿಶೇಷ ಆಹ್ವಾನ ಪತ್ರವನ್ನು ಅವರೇ ಓದಿದ್ದು ವಿಶೇಷ.
101 ವರ್ಷದ ಆಲಿಸ್ ಅವರಲ್ಲಿ ಆತ್ಮೀಯವಾಗಿ ಕುಶಲೋಪರಿ ನಡೆಸಿದ ಜಿಲ್ಲಾಧಿಕಾರಿಗಳು, ನಾನು ಯಾರೆಂದು ನಿಮಗೆ ಗೊತ್ತೇ? ನಾನು ನಿಮ್ಮ ಜಿಲ್ಲಾಧಿಕಾರಿ. ಇವರು ಜಿ.ಪಂ. ಸಿಇಒ ಎನ್ನುವುದಾಗಿ ಪರಿಚಯಿಸಿಕೊಂಡರು. ನಿಮ್ಮಿಂದ ಇಡೀ ಜಿಲ್ಲೆಯ ಜನರಿಗೆ ಮತದಾನದಲ್ಲಿ ಭಾಗವಹಿಸುವಂತೆ ಒಂದು ಸಂದೇಶ ಬೇಕಿದೆ. ನಿಮ್ಮ ಇಷ್ಟು ವರ್ಷದ ಮತದಾನದ ಅನುಭವ ಹೇಗಿದೆ? ಓಟು ಹಾಕಲು ಎಷ್ಟು ದೂರವಿದೆ. ಹೇಗೆ ಹೋಗುತ್ತಿದ್ದೀರಿ ಎನ್ನುವುದಾಗಿ ಕೇಳಿದರಲ್ಲದೆ, ನಿಮಗೆ ಮನೆಯಿಂದಲೇ ಈ ಬಾರಿ ಮತದಾನ ಮಾಡಲು ಅವಕಾಶವಿದೆ ಎಂದು ತಿಳಿಸಿದರು. ಇದಕ್ಕೆ ತಮ್ಮದೇ ಮಾತಲ್ಲಿ ಆಲಿಸ್ ಅವರು ಉತ್ತರಿಸಿದರು.
ಈ ಸಂದರ್ಭದಲ್ಲಿ ಜಿ.ಪಂ. ಸಿಇಒ ಪ್ರಸನ್ನ ಎಚ್., ಕುಂದಾಪುರ ಎಸಿ ರಶ್ಮಿ ಎಸ್.ಆರ್., ಕುಂದಾಪುರ ತಹಶೀಲ್ದಾರ್ ಶೋಭಲಕ್ಷ್ಮಿ, ತಾ.ಪಂ. ಇಒ ಮಹೇಶ್ ಹೊಳ್ಳ, ತಲ್ಲೂರು ಗ್ರಾ.ಪಂ. ಪಿಡಿಒ ನಾಗರತ್ನ, ವಿಎ ಹರೀಶ್, ಬಿಎಲ್ಒ ನಾರಾಯಣ್, ಮತ್ತಿತರರು ಉಪಸ್ಥಿತರಿದ್ದರು.