ಮಣಿಪಾಲ, ಜ 10 (DaijiworldNews/DB): 80 ಬಡಗಬೆಟ್ಟು ಗ್ರಾಮದ ಮಂಚಿ ರಾಜೀವನಗರದ ಮೀಸಲು ಅರಣ್ಯ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಅಗ್ನಿ ಅವಘಡ ಸಂಭವಿಸಿದ್ದು, ಮನೆ ಬಳಿ ರಾಶಿ ಹಾಕಿದ್ದ ಕಟ್ಟಿಗೆ ರಾಶಿ, ಕಾಡಿನಲ್ಲಿ ಅಕೇಶಿಯಾ ಮರಗಳು ಬೆಂಕಿಗಾಹುತಿಯಾಗಿವೆ.
ಆಕಸ್ಮಿಕವಾಗಿ ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆ ಸುತ್ತಲಿನ ಪ್ರದೇಶವಿಡೀ ಬೆಂಕಿ ಆವರಿಸಿಕೊಂಡಿತ್ತು. ದಟ್ಟಹೊಗೆಯೂ ಆವರಿಸಿಕೊಂಡಿದ್ದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ರಾಜೀವನಗರದ ರತ್ನ ಆಚಾರ್ಯ ಅವರ ಹಡಿಲು ಗದ್ದೆಯ ಹುಲ್ಲು ಗಾವಲು, ಮನೆಯೊಂದರ ಬಳಿ ರಾಶಿ ಹಾಕಿದ್ದ ಕಟ್ಟಿಗೆಯ ರಾಶಿ, ಕಾಡಿನ ಅಕೇಶಿಯ ಮರಗಳು ಬೆಂಕಿಗೆ ಆಹುತಿಯಾಗಿವೆ.
ರಾಜೀವನಗರದ 6ನೇ ಅಡ್ಡ ರಸ್ತೆಯ ಬಳಿಯ ಎರಡು ಎಕರೆಯಷ್ಟು ವ್ಯಾಪ್ತಿಯಲ್ಲಿ ಬೆಂಕಿ ಆವರಿಸಿಕೊಂಡಿದ್ದು, ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತತ್ಕ್ಷಣ ಸ್ಥಳಕ್ಕೆ ಅಗ್ನಿಶಾಮಕ ಸಿಬಂದಿ ಆಗಮಿಸಿ ಬೆಂಕಿ ನಂದಿಸಿದರು. ಇದರಿಂದ ಸಂಭಾವ್ಯ ಅನಾಹುತ ತಪ್ಪಿದಂತಾಗಿದೆ.