ಮಂಗಳೂರು, ಡಿ 26 (DaijiworldNews/DB): ಹೆತ್ತವರನ್ನು ಕಳೆದುಕೊಂಡ ಹೆಣ್ಣು ಮಕ್ಕಳಿಬ್ಬರಿಗೆ ಪೋಷಕರ ಪ್ರೀತಿ ನೀಡಿ ಶಿಕ್ಷಣ ಮತ್ತು ಸಾಧನೆಗೆ ನೆರಳಾಗಿ ನಿಂತ ದಂಪತಿಯೊಬ್ಬರು ಇತರರಿಗೂ ಪ್ರೇರಣೆಯಾಗಿದ್ದಾರೆ. ಇಬ್ಬರು ಹೆಣ್ಣು ಮಕ್ಕಳ ಪೈಕಿ ಒಬ್ಬಾಕೆಗೆ ಪೋಷಕರ ಸ್ಥಾನದಲ್ಲೇ ನಿಂತು ಧಾರೆ ಎರೆದು ಕೊಟ್ಟಿದ್ದಾರೆ.
ಮಂಗಳೂರಿನ ಉರ್ವ ಕೆನರಾ ಶಾಲೆಯ ಮುಂಭಾಗದಲ್ಲಿರುವ ಅಭಿಮಾನ್ ಪ್ಯಾಲೇಸ್ ನಿವಾಸಿಗಳಾದ ದಿನೇಶ್ ಶೆಟ್ಟಿ ಮತ್ತು ವಿಜಯಲಕ್ಷ್ಮಿ ಡಿ. ಶೆಟ್ಟಿ ದಂಪತಿಯೇ ಇಬ್ಬರು ಹೆಣ್ಣು ಮಕ್ಕಳ ಪಾಲಿಗೆ ಆಶ್ರಯದಾತರಾಗಿ ಅವರ ಬದುಕನ್ನು ರೂಪಿಸಿದವರು.
22 ವರ್ಷಗಳ ಹಿಂದೆ ಮೂಡುಬಿದಿರೆಯಲ್ಲಿರುವ ತಮ್ಮ ಭೂಮಿಕಾ ಗ್ರಾನೈಟ್ಸ್ ಫ್ಯಾಕ್ಟರಿಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಬಾಗಲಕೋಟೆಯ ಕಾರ್ಮಿಕ ದಂಪತಿ ಮಲೇರಿಯಾ ಜ್ವರಕ್ಕೆ ತುತ್ತಾಗಿ ಸಾವನ್ನಪ್ಪುತ್ತಾರೆ. ಈ ವೇಳೆ ಹೆತ್ತವರೊಂದಿಗೆ ಅದೇ ಫ್ಯಾಕ್ಟರಿಯಲ್ಲಿ ಆಟವಾಡುತ್ತಾ ಬೆಳೆದ ಹೆಣ್ಣು ಮಕ್ಕಳಿಬ್ಬರು ಅನಾಥರಾಗುತ್ತಾರೆ. ಆದರೆ ಈ ಮಕ್ಕಳ ಬದುಕು ಹಾಳಾಗಬಾರದೆಂದು ಯೋಚಿಸಿದ ಫ್ಯಾಕ್ಟರಿಯ ಮಾಲಕ ದಂಪತಿ ದಿಟ್ಟ ನಿರ್ಧಾರ ಕೈಗೊಂಡು ಆ ಮಕ್ಕಳನ್ನು ತಮ್ಮದೇ ಮಕ್ಕಳೆಂಬಂತೆ ಸಾಕಲು ಮುಂದಾಗುತ್ತಾರೆ. ಅಲ್ಲಿಂದ ಜ್ಯೋತಿ ಮತ್ತು ತನುಜಾ ದಿನೇಶ್ ಶೆಟ್ಟಿ ಮತ್ತು ವಿಜಯಲಕ್ಷ್ಮಿ ಡಿ. ಶೆಟ್ಟಿ ಅವರ ಆಸರೆಯಲ್ಲಿ ಬೆಳೆದು ಹಲವು ಸಾಧನೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ತಮ್ಮ ಮಗಳು ದಿಯಾ ಶೆಟ್ಟಿಯ ಜೊತೆಯಲ್ಲಿ ಈ ಮಕ್ಕಳಿಗೂ ಯಾವುದೇ ಕೊರತೆ ಎದುರಾಗದಂತೆ ನೋಡಿಕೊಂಡಿದ್ದಾರೆ ಶೆಟ್ಟಿ ದಂಪತಿ.
ಬಾಗಲಕೋಟೆಯ ಕಾರ್ಮಿಕ ದಂಪತಿಗೆ ಐವರು ಮಕ್ಕಳು. ಓರ್ವ ಪುತ್ರ ಮತ್ತು ಓರ್ವ ಪುತ್ರಿಗೆ ಮದುವೆಯಾಗಿದ್ದರೆ, ಮತ್ತೊಬ್ಬ ಊರಿನಲ್ಲಿಯೇ ಇದ್ದಾನೆ. ದಂಪತಿಯೊಂದಿಗೇ ಇದ್ದ ತನುಜಾ ಮತ್ತು ಜ್ಯೋತಿ ಅವರ ನಿಧನಾನಂತರ ಶೆಟ್ಟಿ ದಂಪತಿಯ ಮನೆಯಲ್ಲಿ ಬೆಳೆದರು.
ಪ್ರತಿಭಾ ಗಣಿಗಳು
ಈ ಇಬ್ಬರು ಹೆಣ್ಣು ಮಕ್ಕಳಿಗೆ ಹೆತ್ತವರ ಪ್ರೀತಿಯನ್ನು ಧಾರೆ ಎರೆದುದ್ದಲ್ಲದೆ, ಸುಶಿಕ್ಷಿತರನ್ನಾಗಿಸಿ, ಅವರಿಷ್ಟದ ಕ್ಷೇತ್ರದಲ್ಲಿ ಬೆಳಗುವಂತೆ ಪೋಷಿಸಿದ್ದಾರೆ. ಜೀವನೋತ್ಸಾಹ ಕಲಿಸಿದ್ದಾರೆ. ಇನ್ನು ಈ ದಂಪತಿಯ ಪುತ್ರಿ ದಿಯಾ ಕೂಡಾ ಇಬ್ಬರನ್ನೂ ತನ್ನದೇ ಸಹೋದರಿಯರಂತೆ ಕಂಡಿದ್ದು, ಶಿಕ್ಷಣ ಸೇರಿದಂತೆ ಎಲ್ಲಾ ವಿಚಾರಗಳಲ್ಲಿಯೂ ಪ್ರೋತ್ಸಾಹ ನೀಡಿದ್ದಾರೆ. ಶೆಟ್ಟಿ ದಂಪತಿಯ ಸಂಬಂಧಿಕರ ಮಗಳು ಪಾಯಲ್ ಕೂಡಾ ಅಷ್ಟೇ ಪ್ರೀತಿ, ಕಾಳಜಿ ತೋರಿಸಿದ್ದಾರೆ. ವಿಶೇಷವೆಂದರೆ ಈ ಇಬ್ಬರು ಹೆಣ್ಣು ಮಕ್ಕಳು ಪ್ರತಿಭಾ ಗಣಿಗಳೇ ಆಗಿದ್ದಾರೆ. ಎಸೆಸ್ಸೆಲ್ಸಿ ಕಲಿತಿರುವ ಜ್ಯೋತಿ ಪೈಟಿಂಗ್ನಲ್ಲಿ ಸಿದ್ದಹಸ್ತಳು. ಮನೆಯ ಸೌಂದರ್ಯವೃದ್ದಿಗೆ ತಾನೇ ಪೈಟಿಂಗ್ ರಚಿಸಿದ್ದಲ್ಲದೆ, ಎಕ್ಸಿಬಿಶನ್ಗಳಲ್ಲಿಯೂ ಪ್ರದರ್ಶನಕ್ಕಿಟ್ಟು ಭೇಷ್ ಎನಿಸಿಕೊಂಡಿದ್ದಾರೆ. ಎಂಬ್ರಾಯ್ಡರಿ ಮತ್ತು ಟೈಲರಿಂಗ್ ತರಬೇತಿಯನ್ನೂ ಪಡೆದಿದ್ದಾರೆ.
ಇನ್ನು ತನುಜಾ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಬಿಕಾಂ ಪದವಿ ಗಳಿಸಿ, ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯದಲ್ಲಿ ಎಂಎಸ್ಡಬ್ಲ್ಯೂ ಪೂರ್ಣಗೊಳಿಸಿ ಸದ್ಯ ಯುನಿಸೆಫ್ನೊಂದಿಗೆ ಕೆಲಸ ಮಾಡುತ್ತಿದ್ದಾರೆ. ಬ್ಯೂಟೀಶಿಯನ್ ತರಬೇತಿ ಪಡೆದಿರುವ ತನುಜಾ, ಸಾಹಿತ್ಯ, ಕ್ರೀಡೆ, ಹಾಡುಗಾರಿಕೆ, ಅಡುಗೆಯಲ್ಲೂ ನೈಪುಣ್ಯಳು. ದಿಯಾ ಪ್ರಸ್ತುತ ಬಿಬಿಎ ಪೂರ್ಣಗೊಳಿಸಿ ಎಂಬಿಎ ಶಿಕ್ಷಣ ಪಡೆಯಲು ಸಿದ್ದತೆ ನಡೆಸುತ್ತಿದ್ದಾರೆ.
ಜ್ಯೋತಿಯ ಬಾಳಲ್ಲಿ ರಾಜಕುಮಾರ
ಬೀದರ್ ಮೂಲದ ಸ್ವತಃ ಆರ್ಟಿಸ್ಟ್ ಆಗಿರುವ ರಾಜಕುಮಾರ ಎಂಬವರೊಂದಿಗೆ ಹಿರಿಯಳಾದ ಜ್ಯೋತಿಯ ವಿವಾಹ ಡಿಸೆಂಬರ್ 25 ನೆರವೇರಿತು. ಆ ಮೂಲಕ ಶೆಟ್ಟಿ ದಂಪತಿ ತಮ್ಮ ಮಗಳಂತೆ ಸಾಕಿದ ಜ್ಯೋತಿಯನ್ನು ಪೋಷಕರ ಸ್ಥಾನದಲ್ಲಿ ನಿಂತು ಧಾರೆ ಎರೆದು ಕೊಟ್ಟಿದ್ದಾರೆ. ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಸ್ವಯಂವರ ಮಂಟಪದಲ್ಲಿ ಜ್ಯೋತಿ ಮತ್ತು ರಾಜಕುಮಾರ ಅವರ ವಿವಾಹ ನೆರವೇರಿತು.
ಇನ್ನು ಜ್ಯೋತಿಯ ವಿವಾಹದ ಮುನ್ನಾದಿನದಂದು ಡೈಜಿವರ್ಲ್ಡ್ ಜೊತೆ ಮಾತನಾಡಿದ ವಿಜಯಲಕ್ಷ್ಮಿ ಡಿ. ಶೆಟ್ಟಿ, ಜ್ಯೋತಿ ಮತ್ತು ತನುಜಾರನ್ನು ತಮ್ಮದೇ ಸಹೋದರಿಯರು ಎಂಬಂತೆ ಸ್ವೀಕರಿಸಿದ ಮಗಳು ದಿಯಾ ಮತ್ತು ಸಂಬಂಧಿಕರ ಮಗಳು ಪಾಯಲ್ಗೆ ನಾನು ಧನ್ಯವಾದ ಹೇಳಬೇಕು. ಕಳೆದ 22 ವರ್ಷಗಳಿಂದ ಯಾವುದೇ ಬೇಧಭಾವ ತೋರಿಸದೆ ಅವರಿಬ್ಬರೂ ಈ ಮಕ್ಕಳೊಂದಿಗೆ ಬೆರೆತಿದ್ದಾರೆ ಎನ್ನುತ್ತಾರೆ.
ಇನ್ನು ತಮಗೆ ಸಿಕ್ಕಿದ ಪ್ರೀತಿಯಾಸರೆಯ ಬಗ್ಗೆ ಮಾತನಾಡಿದ ಜ್ಯೋತಿ, ಒಂದು ವೇಳೆ ನಮ್ಮ ಹೆತ್ತವರು ಬದುಕಿದ್ದರೆ ಅವರಿಂದ ಇಂತಹ ಪ್ರೀತಿ, ವಾತ್ಸಲ್ಯ ಸಿಗುತ್ತಿತ್ತೋ ಗೊತ್ತಿಲ್ಲ. ಇಂತಹ ಪ್ರೋತ್ಸಾಹ, ಪ್ರೀತಿ ಸಿಕ್ಕಲು ನಾವು ಖಂಡಿತಾ ಪುಣ್ಯ ಮಾಡಿರಬೇಕು. ನಮ್ಮನ್ನು ಕೇವಲ ಬೆಳೆಸಿ ದೊಡ್ಡವರನ್ನಾಗಿ ಮಾಡದೇ, ಶಿಕ್ಷಣ, ಶಿಕ್ಷಣೇತರ ಚಟುವಟಿಕೆ ಸೇರಿದಂತೆ ನಮ್ಮ ಸರ್ವತೋಮುಖ ಬೆಳವಣಿಗೆಯಲ್ಲಿ ಪಾತ್ರ ವಹಿಸಿದ್ದಾರೆ. ಹೆತ್ತವರಿಲ್ಲ ಎಂಬ ಕೊರಗು ಬಾರದಂತೆ ನೋಡಿಕೊಂಡಿದ್ದಾರೆ. ಇದೀಗ ನಾನು ಮದುವೆಯಾಗಿ ಬೇರೆ ಮನೆಗೆ ಹೋಗುತ್ತಿರುವ ಸಂದರ್ಭದಲ್ಲಿ ಮನಸ್ಸು, ಹೃದಯ ಭಾರವಾದ ಅನುಭವವಾಗುತ್ತಿದೆ ಎಂದು ಶೆಟ್ಟಿ ದಂಪತಿಯ ಮನೆಯಲ್ಲಿ ಕಳೆದ ಅನುಭವವನ್ನು ಸ್ಮರಿಸಿದರು.