ಬಂಟ್ವಾಳ, ಜು 22 (DaijiworldNews/HR): ತಮ್ಮನಿಗೆ ತಿಂಡಿ ತರುತ್ತೇನೆ ಎಂದು ತಿಳಿಸಿ ಪೇಟೆಗೆ ಹೋಗಿ ವಾಪಾಸು ಮನೆಗೆ ಬರದೆ ನಾಪತ್ತೆಯಾಗಿದ್ದ ವಿದ್ಯಾರ್ಥಿ ಸುರಕ್ಷಿತವಾಗಿ ಮನೆ ತಲುಪಿದ್ದಾನೆ ಎಂದು ತಿಳಿದು ಬಂದಿದೆ.
ಬಿಸಿರೋಡು ಬಸ್ ನಿಲ್ದಾಣದ ಹಿಂಬದಿಯ ಬಾಡಿಗೆ ಮನೆಯಲ್ಲಿ ವಾಸ ಮಾಡುವ ಗಣೇಶ್ ಎಂಬವರ ಮಗ ವಿದ್ಯಾಗಿರಿ ಶಾಲೆಯಲ್ಲಿ 8 ನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುವ ವಿದ್ಯಾರ್ಥಿ ದ್ಯಾನ್ (13) ಸಂಜೆ ಶಾಲೆಯಿಂದ ಮನೆಗೆ ಬಂದವನು ಸ್ಕೌಟ್ ಮತ್ತು ಗೈಡ್ಸ್ ನ ಅಂಗಿ ಮತ್ತು ಚಡ್ಡಿ ಹಾಕಿಕೊಂಡು ಮನೆಯಿಂದ ತೆರಳಿದ್ದಾನೆ. ಗಣೇಶ್ ಅವರು ಬಿಸಿರೋಡಿನ ಬಸ್ ನಿಲ್ದಾಣದಲ್ಲಿ ವಿನಾಯಕ ಬೇಕರಿ ನಡೆಸುತ್ತಿದ್ದು, ಮಧ್ಯಾಹ್ನ ಊಟಕ್ಕೆಂದು ಮನೆಗೆ ಬಂದವರು ಊಟ ಮುಗಿಸಿ ಮಲಗಿದ್ದರು, ತಾಯಿ ಬೇಕರಿಗೆ ತೆರಳಿದ್ದರು. ದ್ಯಾನ್ ಅವರು ತಮ್ಮನ ಜೊತೆ ಶಾಲೆಯಿಂದ ಮನೆಗೆ ಬಂದವನು ಅಲ್ಲಿಂದ ತಿಂಡಿ ತರುತ್ತೇನೆ ಎಂದು ಸಂಜೆ 5 ಗಂಟೆಗೆ ಮನೆಯಿಂದ ಹೊರಗೆ ಹೋದವನು ರಾತ್ರಿ 8 ಗಂಟೆಯಾಗುತ್ತ ಬಂದರೂ ಮನೆಗೆ ಬಂದಿರಲಿಲ್ಲ. ಹೀಗಾಗಿ ಮನೆಯವರು ಹಾಗೂ ಪರಿಸರದ ಸಾರ್ವಜನಿಕರು ಜೊತೆಯಾಗಿ ಸಿ.ಸಿ.ಕ್ಯಾಮರಾದಲ್ಲಿ ಹಾಗೂ ಇತರ ಕಡೆಗಳಲ್ಲಿ ಹುಡುಕಾಟ ನಡೆಸಿದ್ದರು.
ಇನ್ನು ಬಾಲಕ ಅಮ್ಟಾಡಿ ಸಮೀಪದ ಗೋರೆಮಾರ್ ಎಂಬಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಗಮನಿಸಿದ ರಿಕ್ಷಾ ಚಾಲಕರೊಬ್ಬರು ಮನೆಯವರಿಗೆ ಮಾಹಿತಿ ನೀಡಿದ್ದು, ಇದೀಗ ಬಾಲಕ ತನ್ನ ಹೆತ್ತವರನ್ನು ಸೇರಿದ್ದಾನೆ.