ಕುಂದಾಪುರ, ಜು 20 (DaijiworldNews/SM): ಟೋಲ್ ಗೇಟ್ ನ ಎಮರ್ಜೆನ್ಸಿ ಎಂಟ್ರಿ ಟ್ರ್ಯಾಕ್ ನಲ್ಲಿ ಮಲಗಿದ್ದ ದನ, ಎರಡೆರಡು ಫೈಬರ್ ಬ್ಯಾರಿಕೇಡ್ ಗಳಿಂದಾಗಿ ವೇಗವಾಗಿ ಬರುತ್ತಿದ್ದ ಆಂಬ್ಯುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿದ್ದು, ಆಂಬ್ಯುಲೆನ್ಸ್ ಟೋಲ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಳಗಿದ್ದ ರೋಗಿ ಹಾಗೂ ಸಂಬಂಧಿಕರು ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಇದೀಗ ಲಭ್ಯವಾಗಿದೆ.
ಶಿರೂರು ಟೋಲ್ ಗೇಟ್ ನಲ್ಲಿ ಈ ಅವಘಡ ಸಂಭವಿಸಿದ್ದು, ನಾಲ್ವರು ಸಾವನ್ನಪ್ಪಿ, ಮೂರು ಜನ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಬುಧವಾರ ಸಂಜೆ ನಾಲ್ಕು ಗಂಟೆ ಏಳು ನಿಮಿಷಕ್ಕೆ ಈ ಅವಘಡ ನಡೆದಿದೆ. ಅಪಘಾತದಲ್ಲಿ ಮೃತಪಟ್ಟವರನ್ನುರೋಗಿಯಾಗಿದ್ದ ಮೂಲತಃ ಹೊನ್ನಾವರದ ಬಳ್ಕೂರು ನಿವಾಸಿ ಪ್ರಸ್ತುತ ಹೊನ್ನಾವರ ಹಡಿನಬಾಳು ಹಾಡಗೇರಿ ಎಂಬಲ್ಲಿ ಬಾಡಿಗೆ ಮನೆ ಮಾಡಿಕೊಂಡಿರುವ ಬಿರಿಯಾನಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಗಜಾನನ ಗಣಪ ನಾಯ್ಕ(55) ಹಾಗೂ ಹಾಡಗೇರಿ ಹಡಿನಬಾಳು ನಿವಾಸಿಗಳಾಗಿರುವ ಲೋಕೇಶ್(48), ಅವರ ಪತ್ನಿ ಜ್ಯೋತಿ(44), ಹಾಗೂ ಗಜಾನನ ಕೆಲಸ ಮಾಡುತ್ತಿದ್ದ ಬಿರಿಯಾನಿ ಹೊಟೇಲ್ ಮಾಲೀಕ ಮಂಜುನಾಥ್(48) ಎಂದು ತಿಳಿದು ಬಂದಿದೆ. ಗಾಯಗೊಂಡವರನ್ನು ಮೃತ ಗಜಾನನ ಅವರ ಪತ್ನಿ ಗೀತಾ(50), ಸ್ನೇಹಿತ ರಿಕ್ಷಾ ಚಾಲಕ ಗಣೇಶ್ (40), ಹಾಗೂ ಗಜಾನನ ಅವರ ಅಳಿಯ ಶಶಾಂಕ್ ನಾಯ್ಕ್ ಹಾಗೂ ಅಂಬ್ಯುಲೆನ್ಸ್ ಚಾಲಕ ರೋಶನ್ ಎಂದು ಗುರುತಿಸಲಾಗಿದೆ.
ಘಟನೆ ವಿವರ:
ಗಜಾನನ ಗಣಪ ನಾಯ್ಕ್ ಬಿರಿಯಾನಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಧ್ಯಾಹ್ನ ಊಟ ಮಾಡುತ್ತಿದ್ದಾಗ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಹೊನ್ನಾವರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಉಡುಪಿಯ ಆದರ್ಶ ಆಸ್ಪತ್ರೆಗೆ ಕೊಂಡೊಯ್ಯುವಂತೆ ಸೂಚಿಸಲಾಗಿದೆ. ಅದರಂತೆ ರೋಶನ್ ಚಲಾಯಿಸುತ್ತಿದ್ದ ಅಂಬ್ಯುಲೆನ್ಸ್ ನಲ್ಲಿ ರೋಗಿ ಗಜಾನನ ಅವರನ್ನು ಅವರ ಪತ್ನಿ ಗೀತಾ, ಸಂಬಂಧಿಕರಾದ ಲೋಕೇಶ್ ನಾಯ್ಕ್, ಪತ್ನಿ ಜ್ಯೋತಿ, ಶಶಾಂಕ್ ನಾಯ್ಕ್, ಪರಿಚಯದ ರಿಕ್ಷಾ ಚಾಲಕ ಗಣೇಶ್, ಹೊಟೆಲ್ ಮಾಲೀಕ ಮಂಜುನಾಥ್ ಉಡುಪಿಗೆ ಬರುತ್ತಿದ್ದರು.
ಶಿರೂರು ಟೋಲ್ ಗೇಟ್ ಸಮೀಪ ಆಂಬ್ಯುಲೆನ್ಸ್ ಬರುತ್ತಿದ್ದಂತೆ ಚಾಲಕ ರೋಷನ್ ಎಮರ್ಜೆನ್ಸಿ ಎಂಟ್ರಿ ಟ್ರ್ಯಾಕ್ ನಲ್ಲಿ ಎರಡೆರಡು ಕಡೆ ಹಾಕಲಾದ ಬ್ಯಾರಿಕೇಡ್ ಗಳನ್ನು ನೋಡಿದ್ದಾನೆ. ಜೊತೆಗೆ ಟ್ರ್ಯಾಕ್ ನಲ್ಲಿ ಮಲಗಿದ್ದ ದನವೊಂದು ಇದ್ದಕ್ಕಿದ್ದಂತೆ ಏಳಲು ಪ್ರಯತ್ನಿಸಿದೆ. ಇದರಿಂದ ಗೊಂದಲವಾಗಿ ಬ್ರೇಕ್ ಹಾಕಿದ್ದಾನೆ. ಪರಿಣಾಮ ಅಂಬ್ಯುಲೆನ್ಸ್ ನಿಯಂತ್ರಣ ತಪ್ಪಿದೆ. ಕೇವಲ ಎರಡು ಸೆಕುಂಡುಗಳಲ್ಲಿ ಆಂಬ್ಯುಲೆನ್ಸ್ ಒಂದು ಸುತ್ತು ತಿರುಗುತ್ತಾ ಬಂದು ಟೋಲ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಂಬ್ಯುಲೆನ್ಸ್ ಬರುತ್ತಿದ್ದಂತೆ ಚುರುಕಾದ ಟೋಲ್ ಸಿಬ್ಬಂದಿ ಓಡಿ ಬಂದು ತುರ್ತು ಪ್ರವೇಶದಲ್ಲಿ ಇಡಲಾದ ಫೈಬರ್ ಬ್ಯಾರೀಕೇಡ್ ಗಳನ್ನು ತೆಗೆಯುವಷ್ಟರಲ್ಲಿ ವಾಹನ ಪಲ್ಟಿಯಾಗಿ ಸಿಬ್ಬಂದಿಗಳ ಮೇಲೆರಗಿದೆ.
ಅಪಘಾತದ ತೀವ್ರತೆಗೆ ಆಂಬ್ಯುಲೆನ್ಸಿನ ಹಿಂಬದಿಯ ಬಾಗಿಲು ತೆರೆಯಲ್ಪಟ್ಟಿದ್ದು ಒಳಗಿದ್ದವರು ಹೊರಕ್ಕೆಸೆಯಲ್ಪಟ್ಟಿದ್ದಾರೆ. ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಮೂರು ಜನ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಅಪಘಾತದಲ್ಲಿ ಟೋಲ್ ಗೇಟ್ ಸಿಬ್ಬಂದಿಗಳು ಅಲ್ಪ ಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಟೋಲ್ ಗೇಟ್ ಪಕ್ಕದಲ್ಲಿ ಪ್ರತಿನಿತ್ಯ ವಾಹನಗಳು ನಿಲ್ಲುವುದರಿಂದ ಬಿದ್ದ ಆಯಿಲ್ ನಿಂದಾಗಿ, ಮಳೆ ಬರುತ್ತಿದ್ದುದರಿಂದ ವಾಹನ ಬ್ರೇಕ್ ಹಾಕಿದಾಗ ವಾಹನ ನಿಯಂತ್ರಣ ತಪ್ಪಿದೆ ಎನ್ನಲಾಗಿದೆ.
ಗಾಯಗೊಂಡವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.