ಉಳ್ಳಾಲ, ಜು 19 (DaijiworldNews/SM): ಕರಾವಳಿ ಭಾಗದಲ್ಲಿ ನೆರೆ, ಕಡಲ್ಕೊರೆತ ಹೊಸತಲ್ಲ, ಕಾಂಗ್ರೆಸ್ ಸರ್ಕಾರವಿದ್ದಾಗ ಕಡಲ್ಕೊರೆತ ತಡೆಗೆ ಪ್ರತಿವರ್ಷ ನಿರ್ವಹಣೆ ಮಾಡುತ್ತಿದ್ದರೆ ಈ ಸರ್ಕಾರ ಕ್ರಮ ಕೈಗೊಂಡಿಲ್ಲ. ಎಡಿಬಿ ಕಾಮಗಾರಿಯನ್ನು ಗಮನಿಸುವಾಗ ಭ್ರಷ್ಟಾಚಾರ ಕಂಡು ಬರುತ್ತಿದ್ದು ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ವಿದಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆಗ್ರಹಿಸಿದರು.
ಉಳ್ಳಾಲ ಮತ್ತು ಸೋಮೇಶ್ವರ ಕಡಲ್ಕೊರೆತ ಪ್ರದೇಶಕ್ಕೆ ಮಂಗಳವಾರ ಭೇಟಿ ನೀಡಿದ ಅವರು, ಎಡಿಬಿ ಕಾಮಗಾರಿಗೆ ಮೊದಲು ಆಳವಾಗಿ ಯೋಚಿಸಿ ತಾಂತ್ರಿಕ ನಿರ್ವಹಿಸುತ್ತದೆ. ಆದರೆ ಇಲ್ಲಿ ಅದೆಲ್ಲವನ್ನೂ ಮೀರಿ ಕೆಲಸ ನಡೆದಿದ್ದು ಭ್ರಷ್ಟಾಚಾರ ಜೋರಾಗಿ ನಡೆದಿರುವುದು ಕಂಡು ಬರುತ್ತದೆ. ಕಾಮಗಾರಿ ಸಂದರ್ಭ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಸರ್ಕಾರದ ಜವಾಬ್ದಾರಿ, ಆದರೆ ಆ ಕೆಲಸವೂ ನಡೆದಿಲ್ಲ. ಇವೆಲ್ಲದರ ಬಗ್ಗೆ ಸಮಗ್ರ ತನಿಖೆಯಾದಾಗ ಕಾಮಗಾರಿಯ ಹುಳುಕು ಹೊರಬರುತ್ತದೆ ಎಂದರು.
ಈ ಬಾರಿಯೂ ಕರಾವಳಿಯಲ್ಲಿ ನೆರೆ, ಕಡಲ್ಕೊರೆತದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಕಷ್ಟು ಜನ ಮನೆ ಕಳೆದುಕೊಂಡಿದ್ದು ಅವರಿಗೆ ತಕ್ಷಣ ಪರಿಹಾರ, ಮನೆ, ಆಸ್ತಿ ಕಳೆದುಕೊಂಡವರಿಗೆ ಪುನರ್ವಸತಿ ವ್ಯವಸ್ಥೆ ಮಾಡಬೇಕು. ಮುಖ್ಯಮಂತ್ರಿ ಕರಾವಳಿಗೆ ಭೇಟಿ ನೀಡಿದರೂ ಇನ್ನೂ ಪರಿಹಾರ ವ್ಯವಸ್ಥೆಗೆ ಕ್ರಮ ಕೈಗೊಂಡಿಲ್ಲ. ಪರಿಹಾರ ವಿಚಾರದಲ್ಲಿ ಸರ್ಕಾರಕ್ಕೆ ಪುರುಸೊತ್ತಿಲ್ಲದಂತೆ ಕಾಣುತ್ತದೆ ಎಂದು ಟೀಕಿಸಿದರು.
ಉಳ್ಳಾಲ ಭಾಗದಲ್ಲಿ ಅಕ್ರಮ ಮರಳು ಮಾಫಿಯಾ ಇದ್ದು ಸ್ವಚ್ಛ ಸರ್ಕಾರ ಎಂದು ಹೇಳಿಕೊಳ್ಳುತ್ತಿರುವ ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕಿತ್ತು, ಆದರೆ ನಲ್ವತ್ತು ಶೇಕಡಾ ಕಮಿಷನ್ ನಲ್ಲಿರುವ ಸರ್ಕಾರ ಅಕ್ರಮ ಮರಳು ಮಾಫಿಯಾಕ್ಕೆ ಉತ್ತೇಜನ ನೀಡುತ್ತಿದೆ ಎಂದು ಆರೋಪಿಸಿದರು.
ಕಂದಾಯ ಸಚಿವ ಆರ್.ಅಶೋಕ್ ಅವರ 60 ವರ್ಷಗಳಿಂದ ಕಡಲೂ ಇತ್ತು, ಕೊರೆತವೂ ಇತ್ತು ಎನ್ನುವ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಹರಿಪ್ರಸಾದ್, ಅಶೋಕ್ ಅವರು ಬೆಂಗಳೂರಿನ ಕೆರೆ, ಕಾಲುವೆಗಳನ್ನು ವಶಪಡಿಸಿಕೊಂಡು ರಾಜಕಾರಣ ಮಾಡುತ್ತಿದ್ದು, ಅವರಿಗೆ ಉಳ್ಳಾಲದ ಸಮುದ್ರದ ಬಗ್ಗೆ ಗೊತ್ತಿಲ್ಲ. ಸಮುದ್ರದಲ್ಲಿ ಸಿಲುಕಿರುವ ಹಡಗು ಮುಳುಗಡೆಯಾದರೆ ತೈಲ ಸೋರಿಕೆಯಾಗಿ ಪರಿಸರಕ್ಕೆ ಹಾನಿಯಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭ ಶಾಸಕ ಯು.ಟಿ.ಖಾದರ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಡಿಸಿಸಿ ಸದಸ್ಯ ಸುರೇಶ್ ಭಟ್ನಗರ, ಕೊಣಾಜೆ ಗ್ರಾಮ ಪಂಚಾಯಿತಿ ಸದಸ್ಯ ದೇವಣ್ಣ ಶೆಟ್ಟಿ, ಮುಖಂಡರಾದ ಬಾಝಿಲ್ ಡಿಸೋಜ, ಆಲ್ವಿನ್ ಡಿಸೋಜ, ಸುರೇಖ ಚಂದ್ರಹಾಸ, ರಝಾಕ್ ಕುಕ್ಕಾಜೆ, ನಝರ್ ಷಾ, ದೀಪಕ್ ಪಿಲಾರ್, ಅಚ್ವುತ ಗಟ್ಟಿ, ದೇವಕಿ ಉಳ್ಳಾಲ್, ಚಂದ್ರಿಕಾ ರೈ, ಹಮೀದ್ ಹಸನ್ ಮಾಡೂರು, ಸಲಾಂ ಉಚ್ಚಿಲ್ ಇನ್ನಿತರರು ಉಪಸ್ಥಿತರಿದ್ದರು.