ಮಂಗಳೂರು, ಜು 18 (DaijiworldNews/HR): ರಾಜ್ಯದಲ್ಲಿಯೇ ಸರಕಾರಿ ಸ್ವಾಮ್ಯದ ದೊಡ್ಡ ಮಾರ್ಕೆಟ್ ಎಂದು ಹೆಗ್ಗಳಿಕೆ ಪಾತ್ರವಾಗಿದ್ದ ಸುರತ್ಕಲ್ ಮಾರುಕಟ್ಟೆಯ ಕಾಮಗಾರಿ ಸ್ಥಗಿತಗೊಂಡಿರುವುದಕ್ಕೆ ಮಾಜಿ ಶಾಸಕ ಮೊಹಿಯುದ್ದೀನ್ ಬಾವ ಅವರು ಕ್ಷೇತ್ರದ ಶಾಸಕ ಭರತ್ ಶೆಟ್ಟಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನನ್ನ ಕನಸಿನ ಕೂಸಾದ ಸುರತ್ಕಲ್ ಮಾರುಕಟ್ಟೆ ನೆನೆಗುದಿಗೆ ಬಿದ್ದಿರುವುದು ಅದು ಕ್ಷೇತ್ರದ ಹಾಲಿ ಶಾಸಕರ ವೈಫಲ್ಯತೆಯನ್ನು ಎದ್ದು ತೋರಿಸುತ್ತಿದೆ ಎಂಬ ಒಂದೇ ಕಾರಣಕ್ಕಾಗಿ ಇಂದು ಕ್ಷೇತ್ರದ ಶಾಸಕರಾದ ಭರತ್ ಶೆಟ್ಟಿಯವರು ನನ್ನ ವಿರುದ್ಧ ಹೇಳಿಕೆಯನ್ನು ನೀಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.
ಸುಮಾರು 160 ಕೋಟಿ ರೂಪಾಯಿಗಳ ಅನುದಾನದಲ್ಲಿ ಸುರತ್ಕಲ್ಲಿನ ಹೃದಯಭಾಗದಲ್ಲಿ ಅತ್ಯಾಧುನಿಕ ರೀತಿಯಲ್ಲಿ ಸುಸಜ್ಜಿತವಾದ ಮಾರುಕಟ್ಟೆಯನ್ನು ತರುವ ಉದ್ದೇಶವನ್ನಿಟ್ಟುಕೊಂಡು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷ ಅನುದಾನವನ್ನು ಅರುವತ್ತು ಶಾಸಕರ ವಿರೋಧದ ನಡುವೆಯೂ ಯೋಜನೆಗೆ ಅನುಮೋದನೆಯನ್ನು ಪಡೆದಿದ್ದು, 2016ರಲ್ಲಿ ಮಾರುಕಟ್ಟೆ ನಿರ್ಮಾಣದ ಪ್ರಕ್ರಿಯೆಯು ಪ್ರಾರಂಭವಾಗಿದ್ದು ಇದಕ್ಕಾಗಿ ಮೊದಲು ಇದ್ದಂತಹ ಮಾರುಕಟ್ಟೆಯ ಅಂಗಡಿಗಳನ್ನು ಸುಮಾರು 6 ಕೋಟಿ ವೆಚ್ಚದಲ್ಲಿ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣ ಮಾಡಿ ಅದಕ್ಕೆ ಸ್ಥಳಾಂತರಿಸಲು ಬಹಳ ಶ್ರಮ ಪಡಲಾಯಿತು ಆದರೆ ಎರಡು ವರ್ಷಗಳ ಹಿಂದೆ ಕಾಮಗಾರಿ ಆರಂಭವಾಗಿದ್ದರೂ ಇನ್ನೂ ಏಕೆ ಪೂರ್ಣಗೊಳಿಸಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಭರತ್ ಶೆಟ್ಟಿ ಅವರೇ 2017ರ ಡಿಸೆಂಬರಿನಲ್ಲಿ ಸದ್ರಿ ಮಾರುಕಟ್ಟೆಗೆ ಟೆಂಡರನ್ನು ಕರೆದಿದ್ದು 2018ರಲ್ಲಿ ಸುಮಾರು 61 ಕೋಟಿ ರೂಪಾಯಿಗಳು ಬಿಡುಗಡೆಗೊಂಡು ಕಾಮಗಾರಿ ಪ್ರಾರಂಭಗೊಂಡು ಭರದಿಂದ ಸಾಗುತ್ತಿತ್ತು, ಆದರೆ ಮಾರ್ಕೆಟಿಗೆ ಬಿಡುಗಡೆಯಾದ 61ಕೋಟಿಯಲ್ಲಿ ನೀವು ಮಾಡಿದ ಕಾಮಗಾರಿಗೆ ವ್ಯಯಿಸಿದ್ದು ಕೇವಲ 16 ಕೋಟಿ ರೂಪಾಯಿ ಮಾತ್ರ, ಉಳಿದ ಮೊತ್ತ ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿದ್ದಾರೆ.
ಈಗ 61 ಕೋಟಿ ಅನುದಾನ ಬಿಡುಗಡೆಗೊಂಡಿದ್ದು ಅದರಲ್ಲಿ 25 ಲಕ್ಷ ಖರ್ಚು ಮಾಡಿ ಯುಜಿಡಿ ಲೈನನ್ನು ಕಳೆದ ನಾಲ್ಕು ವರ್ಷದಲ್ಲಿ ಸ್ಥಳಾಂತರಿಸಲಿಕ್ಕೆ ತಮಗೆ ಕಷ್ಟ ಸಾಧ್ಯವಾದರೆ ತಾವು ಅಧಿಕಾರಿಗಳು ಆಶಾಯಕತೆ ವ್ಯಕ್ತ ಪಡಿಸಿದ್ದಾರೆ ಎಂಬ ಮಾತನ್ನು ಹೇಳಿದ್ದೀರಾ ಇದಕ್ಕಿಂತ ನಾಚಿಕೆಗೇಡು ಬೇರೊಂದಿಲ್ಲ, ಅಲ್ಲದೆ ತಾವು ಶಾಸಕರಾಗಿದ್ದು ಕೊಂಡು ಏನು ಪ್ರಯೋಜನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.