ಕಾರ್ಕಳ, ಜು 16 (DaijiworldNews/MS): ಮೃತದೇಹ ದಹನಕ್ಕಾಗಿ ರುದ್ರಭೂಮಿಯಲ್ಲಿರುವ ಕಬ್ಬಿಣದ ಚೌಕಟ್ಟಿನ ನಡುವೆ ಇದ್ದ ಸಿಲಿಕಾನ್ ಬ್ಲಾಕ್ ನ್ನು ಬಿಡದೆ ಕಳ್ಳರು ಕದ್ದೊಯ್ಯದ ಘಟನೆ ಶುಕ್ರವಾರ ರಾತ್ರಿ ಕಾರ್ಕಳ ಪುರಸಭಾ ವ್ಯಾಪ್ತಿಯ ಕರಿಯಕಲ್ಲು ಹಿಂದೂರುದ್ರಭೂಮಿಯಲ್ಲಿ ನಡೆದಿದೆ.
ಈ ಕುರಿತು ಕರಿಯಕಲ್ಲು ಹಿಂದೂರುದ್ರಭೂಮಿ ವ್ಯವಸ್ಥಾಪನ ಸಮಿತಿಯ ಸಂಚಾಲಕ ಪ್ರಕಾಶ್ ರಾವ್ ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕರಿಯಕಲ್ಲು ಹಿಂದೂರುದ್ರಭೂಮಿ ವ್ಯವಸ್ಥಾಪನ ಸಮಿತಿಯೂ ಸೇವಾ ಉದ್ದೇಶದಿಂದ ಈ ಹಿಂದೆ ಅನಾಥ ಶವಗಳನ್ನು ಹಾಗೂ ಕೊವೀಡ್ ಸಮಯದಲ್ಲೂ ಹಗಲು ರಾತ್ರಿ ಎನ್ನದೇ ಶವಗಳನ್ನು ದಹಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿತ್ತು. ಆದರೆ ಜು.15 ರ ತಡರಾತ್ರಿ ಯಾರೋ ಅಪರಿಚಿತರು ಮೃತದೇಹಗಳನ್ನು ಸುಡಲು ಇಟ್ಟಿರುವ ಕಬ್ಬಿಣದ ಚೌಕಟ್ಟು(Frame)ಗಳ ನಡುವೆ ಇರುವ ದೊಡ್ಡ ನಾಲ್ಕು ಸಿಲಿಕಾನ್ ಬ್ಲಾಕ್ ಗಳ ಪೈಕಿ ಒಂದನ್ನು ಕಳವು ಮಾಡಿದ್ದಾರೆ. ಇಂದು ಬೆಳಗ್ಗೆ ಶವ ಸಂಸ್ಕಾರಕ್ಕೆ ತಯಾರಿ ಮಾಡುವ ಸಂದರ್ಭದಲ್ಲಿ ಸಿಲಿಕಾನ್ ಬ್ಲಾಕ್ ನಾಪತ್ತೆಯಾಗಿರುವುದು ಕಂಡು ಬಂದಿದ್ದು ಕಳವಾದ ಸೊತ್ತು ಪತ್ತೆ ಹಚ್ಚಿ ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ದೂರು ಸಂಚಾರಲಕರು ನೀಡಿದ್ದಾರೆ .