ಕಾಸರಗೋಡು, ಜು 15 (DaijiworldNews/SM): ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತಂದ ಸಂದರ್ಭದಲ್ಲಿ ಪೊಲೀಸರನ್ನು ತಪ್ಪಿಸಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ವಿದ್ಯಾನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಣಂಗೂರಿನ ಅಹಮ್ಮದ್ ಕಬೀರ್(26) ಪರಾರಿಯಾಗಿದ್ದ ಆರೋಪಿ. ಶುಕ್ರವಾರ ಸಂಜೆ ಎಡನೀರಿನಿಂದ ಈತನನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಎಡನೀರಿನ ಕ್ವಾಟರ್ಸ್ ವೊಂದರ ಹಿಂಬದಿಯ ನಿರ್ಜನ ಪ್ರದೇಶದಲ್ಲಿ ಅವಿತಿದ್ದ ಈತ ನನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ತೆಗೆದುಕೊಂಡರು ಜುಲೈ 13 ರಂದು ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರು ಪಡಿಸಿ ಸಮೀಪದ ಕ್ಯಾಂಟಿನ್ ಗೆ ತೆರಳಿದ್ದ ಸಂದರ್ಭದಲ್ಲಿ ಈತ ಪರಾರಿಯಾಗಿದ್ದನು.
ಮಾದಕ ವಸ್ತು ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತನಾಗಿದ್ದ ಈತ ಕಣ್ಣೂರು ಸೆಂಟ್ರಲ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದನು. ಆರೋಪಿ ಪರಾರಿಯಾಗಲು ನೇರವಾದ ಆಲಂಪಾಡಿಯ ಜಾವೇದ್ ನನ್ನು ಗುರುವಾರ ಪೊಲೀಸರು ಬಂಧಿಸಿದ್ದರು.