ಕಾಸರಗೋಡು, ಜು 15 (DaijiworldNews/SM): ಬೆಂಗಳೂರಿನಲ್ಲಿ ಕಾಸರಗೋಡು ನಿವಾಸಿಯೋರ್ವರನ್ನು ತಂಡವೊಂದು ಇರಿದು ಕೊಲೆಗೈದ ಘಟನೆ ಗುರುವಾರ ರಾತ್ರಿ ನಡೆದಿದೆ.
ಜಿಗಣಿ ಟಾಟಾ ಮೆಕಾನಿಕಲ್ ವಿಭಾಗದ ಉದ್ಯೋಗಿ, ಕಾಸರಗೋಡು ರಾಜಪುರ ಚೆರುವೆಲ್ ನ ಸಾನು ಥೋಮ್ಸನ್(31) ಕೊಲೆಗೀಡಾದವನು. ರಾತ್ರಿ ಕೆಲಸ ಮುಗಿಸಿ ನಡೆದುಕೊಂಡು ವಾಸ ಸ್ಥಳಕ್ಕೆ ಬರುತ್ತಿದ್ದಾಗ ಬೈಕ್ ನಲ್ಲಿ ಬಂದ ಮೂವರ ತಂಡವೊಂದು ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿದೆ. ಘಟನಾ ಸ್ಥಳದ ಸಿ ಸಿ ಟಿ ವಿ ದ್ರಶ್ಯಗಳನ್ನು ಪೊಲೀಸರು ಪರಿಶೀಲಿಸಿದ್ದು , ಕೊಟೇಶನ್ ತಂಡ ಕೃತ್ಯ ನಡೆಸಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.
ಏಳು ವರ್ಷಗಳಿಂದ ಥೋಮ್ಸನ್ ಬೆಂಗಳೂರಿನಲ್ಲಿ ಉದ್ಯೋಗ ದಲ್ಲಿದ್ದು ಕೃತ್ಯಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ತಂಡವು ಇನ್ನೊಬ್ಬ ವ್ಯಕ್ತಿಯ ಕೊಲೆಗೆ ಸಂಚು ನಡೆಸಿತ್ತು . ಆದರೆ ಗುರಿ ತಪ್ಪಿ ಥೋಮ್ಸನ್ ನ ಕೊಲೆ ನಡೆಸಿದೆ ಎಂಬ ಅನುಮಾನವೂ ಉಂಟಾಗಿದೆ. ಘಟನೆ ಸುದ್ದಿ ತಿಳಿದು ಕಾಸರಗೋಡಿನಲ್ಲಿರುವ ಸಂಬಂದಿಕರು ಬೆಂಗಳೂರಿಗೆ ತೆರಳಿದ್ದು, ಬೆಂಗಳೂರಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಊರಿಗೆ ತರಲಾಗುವುದು . ಆದಿತ್ಯವಾರ ರಾಜಾಪುರ ಹೋಲಿ ಫ್ಯಾಮಿಲಿ ಚರ್ಚ್ ನಲ್ಲಿ ಅಂತ್ಯ ಕ್ರಿಯೆ ನೆರವೇರಲಿದೆ.