ಬೈಂದೂರು, ಜು 15 (DaijiworldNews/DB): ಕಾರಿನೊಂದಿಗೆ ವ್ಯಕ್ತಿಯನ್ನು ಸುಟ್ಟು ಕೊಲೆಗೈದ ಪ್ರಕರಣವನ್ನು ಒಂದೇ ದಿನದಲ್ಲಿ ಭೇದಿಸಿದ ಬೈಂದೂರು ಪೊಲೀಸ್ ತಂಡಕ್ಕೆ ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕರು 50 ಸಾವಿರ ರೂ. ಬಹುಮಾನ ಘೋಷಿಸಿರುವುದಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ತಿಳಿಸಿದ್ದಾರೆ.
ಬೈಂದೂರು ಪೊಲೀಸ್ ಠಾಣೆಗೆ ಭೇಟಿ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚಿನ್ನಾಭರಣ ಕಳವು ಪ್ರಕರಣ ಹಾಗೂ ಕಾರಿನೊಂದಿಗೆ ವ್ಯಕ್ತಿಯನ್ನು ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಂಡ ರಚಿಸಿ ಕ್ಷಿಪ್ರವಾಗಿ ಪ್ರಕರಣ ಭೇದಿಸಲಾಗಿದೆ. ಪೊಲೀಸ್ ತಂಡಕ್ಕೆ ಪಶ್ಚಿಮ ವಲಯ ಐಜಿಪಿ ಮೆಚ್ಚುಗೆ ಸೂಚಿಸಿರುವುದಾಗಿ ತಿಳಿಸಿದರು.
ಕಾರಿನೊಂದಿಗೆ ವ್ಯಕ್ತಿಯನ್ನು ಸುಟ್ಟು ಕೊಲೆಗೈದ ಪ್ರಕರಣದ ತನಿಖೆ ಮುಂದುವರಿದಿದೆ. ಮುಂದೆ ಹೆಚ್ಚಿನ ಮಾಹಿತಿ ನೀಡಲಾಗುವುದು. ಬೈಂದೂರು ವ್ಯಾಪ್ತಿಯಲ್ಲಿ ಅನಧಿಕೃತವಾಗಿ ತೆರೆದಿರುವ ಅಂಗಡಿಗಳ ಬಗ್ಗೆ ಮಾಹಿತಿ ಇದ್ದು, ಇಲ್ಲಿನ ಪಟ್ಟಣ ಪಂಚಾಯತ್ ಮಾಡುವ ತೆರವು ಕಾರ್ಯಾಚರಣೆಗೆ ಸಹಕಾರಿ ನೀಡುವುದಾಗಿ ತಿಳಿಸಿದರು.
ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಶ್ರೀಕಾಂತ್ ಕೆ., ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಬೈಂದೂರು ಪೊಲೀಸ್ ಉಪನಿರೀಕ್ಷಕ ಪವನ್ ನಾಯಕ್, ಗಂಗೊಳ್ಳಿ ಪೊಲೀಸ್ ಉಪನಿರೀಕ್ಷಕ ವಿನಯ್ ಕೊರ್ಲಹಳ್ಳಿ ಈ ಸಂದರ್ಭ ಇದ್ದರು.
ಪಶ್ಚಿಮ ವಲಯ ಐಜಿಪಿ ಭೇಟಿ
ಠಾಣೆಗೆ ಪಶ್ಚಿಮ ವಲಯ ಐಜಿಪಿ ಭೇಟಿ ನೀಡಿ ಪ್ರಕರಣದ ಮಾಹಿತಿ ಪಡೆದುಕೊಂಡಿದ್ದಾರೆ. ಪ್ರಕರಣವನ್ನು ಭೇದಿಸಿದ ಬೈಂದೂರು ಪೊಲೀಸ್ ತಂಡಕ್ಕೆ ರೂ.50,000 ಬಹುಮಾನವನ್ನು ಘೋಷಿಸಿ ತೆರಳಿದ್ದಾರೆ.