ಸುಳ್ಯ, ಜು 15 (DaijiworldNews/DB): ಸುಳ್ಯ ಮತ್ತು ಕೊಡಗು ಗಡಿ ಭಾಗದ ಕೆಲವಡೆ ಇಂದು ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದೆ. ದೊಡ್ಡ ಶಬ್ದದೊಂದಿಗೆ ಭೂಮಿ ಕಂಪಿಸಿರುವುದು ಅನುಭವಕ್ಕೆ ಬಂದಿರುವುದಾಗಿ ಜನ ಹೇಳಿಕೊಂಡಿದ್ದಾರೆ.
ಕೊಡಗು-ಸುಳ್ಯ ಗಡಿ ಪ್ರದೇಶವಾದ ಚೆಂಬು, ಸಂಪಾಜೆ, ಗೂನಡ್ಕ, ಅರಂತೋಡು, ತೊಡಿಕಾನ ಮುಂತಾದೆಡೆ ಭೂ ಕಂಪನದ ಅನುಭವವಾಗಿದೆ. ಬೆಳಗ್ಗೆ 10.09ರ ವೇಳೆಗೆ ಭೂಮಿಯ ಒಳಗಿನಿಂದ ಭಾರೀ ಶಬ್ದ ಕೇಳಿಸಿದ್ದು, ಸೋಫಾ, ಮಂಚ, ಪಾತ್ರೆ, ಪರಿಕರಗಳು ಅಲುಗಾಡಿವೆ ಎಂಬುದಾಗಿ ಜನರು ಮಾಹಿತಿ ನೀಡಿದ್ದಾರೆ. ವಾಹನದಲ್ಲಿ ಸಂಚರಿಸುತ್ತಿದ್ದವರಿಗೂ ಗುಂಡಿಗೆ ಬಿದ್ದಂತ ಅನುಭವ ಉಂಟಾಗಿದೆ.
ಕಳೆದೊಂದು ತಿಂಗಳಿನಿಂದೀಚೆಗೆ ಈ ಭಾಗಗಳಲ್ಲಿ ಹತ್ತಕ್ಕೂ ಹೆಚ್ಚು ಭಾರಿ ಭೂಕಂಪನದ ಅನುಭವವಾಗಿದ್ದು, ಭಾರೀ ಶಬ್ದದಿಂದ ಕೂಡಿದ ಕಂಪನಕ್ಕೆ ಜನ ಭಯದಿಂದಲೇ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಚ್ಚಾಗಿ ಎತ್ತರದ ಗುಡ್ಡ ಪ್ರದೇಶಗಳಲ್ಲಿ, ಗುಡ್ಡದ ಅಡಿಭಾಗಗಳಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಜನರಿಗೆ ಭೂಕಂಪನ ಮತ್ತು ಧಾರಾಕಾರ ಮಳೆಯಿಂದಾಗಿ ಗುಡ್ಡ ಕುಸಿತದ ಭೀತಿಯೂ ಎದುರಾಗಿದ್ದು, ಪ್ರತಿದಿನ ಇದೇ ಆತಂಕದಲ್ಲಿ ದಿನ ಕಳೆಯಬೇಕಾಗಿ ಬಂದಿದೆ ಎನ್ನುತ್ತಾರೆ ಈ ಭಾಗದ ನಿವಾಸಿಗಳು.