ಬಂಟ್ವಾಳ, ಜು 08 (DaijiworldNews/HR): ಪಂಜಿಕಲ್ಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಭೂಕುಸಿತದಲ್ಲಿ ಮೂರು ಜೀವಗಳನ್ನು ಬಲಿಪಡೆದುಕೊಂಡ ಬೆನ್ನಲ್ಲೇ, ಗ್ರಾ.ಪಂ. ವ್ಯಾಪ್ತಿಯ 2 ಅಪಾಯಕಾರಿ ಪ್ರದೇಶಗಳ ನಾಲ್ಕು ಮನೆಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಕಳೆದ ಬುಧವಾರ ರಾತ್ರಿ ಮುಕ್ಕುಡ ಎಂಬಲ್ಲಿ ನಡೆದ ಭೂಕುಸಿತದ ದುರಂತದಲ್ಲಿ ಕೇರಳ ನಿವಾಸಿಗಳಾದ ವಿಜು, ಬಾಬು, ಸಂತೋಷ್ ಎಂಬವರು ದಾರುಣವಾಗಿ ಸಾವನ್ನಪ್ಪಿದ್ದರು. ಈಹಿ ನ್ನೆಲೆಯಲ್ಲಿ ಎಚ್ಚರತ್ತುಕೊಂಡಿರುವ ಗ್ರಾಮಪಂಚಾಯತ್ ಆಡಳಿತ ಗ್ರಾ.ಪಂ.ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
ಪಂಜಿಕಲ್ಲು ಗ್ರಾ.ಪಂ.ವ್ಯಾಪ್ತಿಯ ಮೂಡನಡುಗೋಡು ಗ್ರಾಮದ ಕುಜಿಲಬೆಟ್ಟು ಎಂಬಲ್ಲಿಯ ಲಲಿತಾ ಲೋಕೇಶ್, ಹೊನ್ನಮ್ಮ ಸಂದೀಪ್, ಡೀಕಮ್ಮ ಗಣೇಶ್ ಎಂಬವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು. ಪಂಜಿಕಲ್ಲು ಗ್ರಾಮದ ಬಸ್ತಿ ಬಳಿಯ ಪ್ರಕಾಶ್ ಮಡಿವಾಳ ಇವರು ಸುರಕ್ಷಿತ ಸ್ಥಳಾಂತರಕ್ಕೆ ನಿರಾಕರಿಸಿದ್ದು ಕಂದಾಯ ಇಲಾಖೆ, ಪಂಚಾಯತ್ ನಿಂದ ಆರಕ್ಷಕ ಸಹಕಾರ ಪಡೆದು ಮನವೊಲಿಸಿ ಸ್ಥಳಾಂತರಿಸಲಾಯಿತು. ಗ್ರಾಮ ಪಂಚಾಯತ್ ನಾದ್ಯಂತ ವಿಪತ್ತು ನಿರ್ವಹಣೆಗೆ ಮುನ್ನೆಚ್ಚರಿಕೆಗಾಗಿ ಮೈಕ್ ಮೂಲಕ ಪ್ರಚಾರ ಕೈಗೊಳ್ಳಲಾಗಿದೆ.
ಇನ್ನು ಗ್ರಾಮ ಪಂಚಾಯತ್ ಅಧ್ಯಕ್ಷರ ಜೊತೆ ಸದಸ್ಯರು ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಮ ಕರಣಿಕರು, ಆರಕ್ಷಕ ಸಿಬ್ಬಂದಿ, ಗ್ರಾಮ ಪಂಚಾಯತ್ ಸಿಬ್ಬಂದಿಗಳು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗ್ರಾಮಪಂಚಾಯತ್ ಅಧ್ಯಕ್ಷ ಸಂಜೀವಪೂಜಾರಿ ಯವರ ಮಾರ್ಗದರ್ಶನದಲ್ಲಿ ಗ್ರಾಮ ಪಂಚಾಯತ್ ನಿಂದ 50 ಮಂದಿ ಯುವಕರ ತುರ್ತು ಸೇವಾ ತಂಡವನ್ನು ರಚಿಸಲಾಗಿದ್ದು, ಈ ತಂಡದ ಮೂಲಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಲೆಮೂಲೆಗಳಲ್ಲಿ ನಿಗಾ ಇಡಲಾಗುತ್ತಿದೆ.
ಪ್ರತಿದಿನ ಬೆಳಿಗ್ಗೆ ಗ್ರಾಮದ ವಿವಿಧೆಡೆ ತೆರಳುವ ತಂಡ ಅಪಾಯಗಳನ್ನು ಪರಿಶೀಲಿಸಿ ಅಗತ್ಯ ಇರುವೆಡೆ ನೆರವು ನೀಡುತ್ತಾರೆ. ಗುರುವಾರದಿಂದ ಕಾರ್ಯಪ್ರವೃತ್ತವಾಗಿರುವ ತಂಡ ಕುಸಿದುಬಿದ್ದ ಮನೆಯೊಂದರ ಸ್ಥಳಾಂತರಕ್ಕೆ ಹಾಗೂ ಮಣ್ಣುಕುಸಿದು ಉಂಟಾದ ಹಾನಿಯೊಂದರ ಪರಿಹಾರ ಕಾರ್ಯಾಚರಣೆಯಲ್ಲಿ ನೆರವಾಗಿದ್ದಾರೆ ಎಂದು ಪಂಜಿಕಲ್ಲು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ವಿದ್ಯಾಶ್ರೀ ತಿಳಿಸಿದ್ದಾರೆ.